ಏನ್ರೀ ಈ ಜನರ ಕರ್ಮ! ಉದ್ದ ಸಾಲಿನಲ್ಲಿ ನಿಮಗೆ ಮತ ಹಾಕಿದ ನಂತರವೂ ಕೆಲಸ ಮಾಡಿಸಿಕೊಳ್ಳಲು ಅಂಗಲಾಚುವಂತಾಗಿದೆ. ಪುರಭವನದಲ್ಲಿ ನಡೆದ ಬಿಬಿಎಂಪಿ ಕಾರ್ಯಾಗಾರದಲ್ಲಿ ಶಾಸಕ ಸುರೇಶ್ಕುಮಾರ್ ಸದಸ್ಯರನ್ನು ಹೀಗೆ ತರಾಟೆಗೆ ತೆಗೆದುಕೊಂಡರು. ಚುನಾವಣೆಗೆ ಅಭ್ಯರ್ಥಿಗಳು ನಿಲ್ಲಬೇಕು ಎಂದು ಯಾವುದೇ ಮತದಾರರು ಮನವಿ ಮಾಡಿಲ್ಲ. ಅಭ್ಯರ್ಥಿಗಳೇ ಮತದಾರರ ಕಾಲು ಹಿಡಿದು ಮತಯಾಚಿಸಿದ್ದಾರೆ. ಆದರೆ ಗೆದ್ದ ಬಳಿಕ ಸಣ್ಣ ಕೆಲಸಗಳನ್ನು ಮಾಡಿಕೊಡಿ ಎಂದು ಹತ್ತಿರ ಬಂದರೆ ಅವರ ಕಷ್ಟ ಕೇಳಲು ಕಾರ್ಪೊರೇಟರ್ ಗಳಿಗೆ ಸಮಯವಿಲ್ಲ. ಜನರು ಉದ್ದ ಸಾಲಿನಲ್ಲಿ ಮತ ಹಾಕುತ್ತಾರೆ. ಸಮಯಕ್ಕೆ ಸರಿಯಾಗಿನ ತೆರಿಗೆ ಪಾವತಿಸುವ ಮೂಲಕ ಕಾಮಗಾರಿಗೆ ವೆಚ್ಚ ಮಾಡಲು ಹಣವನ್ನೂ ನೀಡುತ್ತಾರೆ. ಆದರೆ ಅವರದ್ದೇ ದಯೆಯಿಂದ ಗೆದ್ದಿರುವ ಜನಪ್ರತಿನಿಧಿಗಳು ಅವರನ್ನೇ ಕಡೆಗಣಿಸುತ್ತಾರೆ. `ಕಾರ್ಪೊರೇಷನ್' ಎಂಬುದು `ಕರಪ್ಶನ್' ಎಂಬಂತಾಗಿದೆ. ಬಿಬಿಎಂಪಿಯಲ್ಲಿ ¸ಸೋರಿಕೆ ಹೆಚ್ಚಿದ್ದು, ಇದನ್ನು ತಡೆಯಬೇಕಿದೆ. ಸೋರಿಕೆ ತಡೆದು ಟ್ಯಾಂಕ್ನ ನೀರನ್ನು ಎಲ್ಲರಿಗೂ ಹಂಚಬೇಕು. ಆದರೆ ಸೋರಿಕೆ ತಡೆಯುವುದು ಬಿಟ್ಟು, ನಲ್ಲಿಗಳೇ ಇಲ್ಲದಂತೆ ಮಾಡಲಾಗುತ್ತಿದೆ ಎಂದರು.ಮೇಯರ್ ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಹಾಜರಿದ್ದರು.