ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬಂದು ಜೈಲಿನಲ್ಲಿರುವ ನಟ ಹುಟ್ಟ ವೆಂಕಟ್ ಅವರು ಸೋಮವಾರ ಬೆಳಗ್ಗೆ ಜೈಲಿನ ಕಂಬಿಗೆ ತಲೆಚಚ್ಚಿಕೊಂಡಿದ್ದರಿಂದಾಗಿ ತೀವ್ರ ರಕ್ತಸ್ರಾವವಾಗಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಗಳು ತಿಳಿಸಿವೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಬಂಧನಕ್ಕೊಳಗಾಗಿದ್ದ ಹುಚ್ಚ ವೆಂಕಟ್ ಅವರಿಗೆ ಬೆಂಗಳೂರಿನ 17ನೇ ಸಿಟಿ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನಿಗೆ ಶ್ಯೂರಿಟಿ ನೀಡಲು ಯಾರೊಬ್ಬರು ಮುಂದೆ ಬಂದಿರಲಿಲ್ಲ. ಹೀಗಾಗಿ ಜಾಮೀನು ಮಂಜೂರಾಗಿ 5 ದಿನಗಳು ಕಳೆದರೂ ವೆಂಕಟ್ ಬಂಧನದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ.
ಈ ಕಾರಣದಿಂದ ತೀವ್ರವಾಗಿ ಕೆಂಡಾಮಂಡಲವಾಗಿದ್ದ ಹುಚ್ಚ ವೆಂಕಟ್ ಅವರು ಕಳೆದ ರಾತ್ರಿಯಿಂದಲೇ ಜೈಲಿನ ಕೊಠಡಿಯೊಳಗೆ ಕೂಗಾಡಲಾರಂಭಿಸಿದ್ದರು. ಇಂದು ಬೆಳಿಗ್ಗೆ ಕೂಡ ಕೂಗಾಟ ಆರಂಭಿಸಿದ್ದ ಅವರು ಜೈಲಿನ ಗೋಡೆ ಹಾಗೂ ಕಂಬಿಗಳಿಗೆ ತಲೆ ಚಚ್ಚಿಕೊಂಡಿದ್ದಾರೆ ಇದರ ಪರಿಣಾಮ ವೆಂಕಟ್ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿ ರಕ್ತಸ್ರಾವ ಉಂಟಾಗಿದೆ. ಕೂಡಲೇ ಅಧಿಕಾರಿಗಳು ವೆಂಕಟ್ ಅವರನ್ನು ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆಂದು ತಿಳಿದುಬಂದಿದೆ.
ಖಾಸಗಿ ಟಿವಿ ಚಾನೆಲ್ ವೊಂದರಲ್ಲಿ ಪಾಲ್ಗೊಂಡಿದ್ದ ಹುಚ್ಚ ವೆಂಕಟ್ ಅವರು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ವೆಂಕಟ್ ಅವರನ್ನು ಜ್ಞಾನಭಾರತಿ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಬಳಿಕ ನ್ಯಾಯಾಲಯವು ವೆಂಕಟ್ ಅವರಿಗೆ ನ್ಯಾಯಾಗಂ ಬಂಧನ ವಿಧಿಸಿತ್ತು. ನ.25ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಹುಚ್ಚ ವೆಂಕಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
Advertisement