ಕೆಂಪೇಗೌಡರ ಜಯಂತಿ, ಸ್ಮಾರಕಕ್ಕೆ ಬೇಡಿಕೆ

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ, ಅವರ ಹೆಸರಲ್ಲಿ ಪ್ರಾಧಿಕಾರ ರಚನೆ ಮತ್ತು ಅಂತಾರಾಷ್ಟ್ರೀಯ ಸ್ಮಾರಕಗಳ ನಿರ್ಮಾಣದ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತದೆ ಎನ್ನುವ ವಿಶ್ವಾಸವನ್ನು..
ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದ ಶ್ರೀಗಳು (ಸಂಗ್ರಹ ಚಿತ್ರ)
ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದ ಶ್ರೀಗಳು (ಸಂಗ್ರಹ ಚಿತ್ರ)

ರಾಮನಗರ: ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ, ಅವರ ಹೆಸರಲ್ಲಿ ಪ್ರಾಧಿಕಾರ ರಚನೆ ಮತ್ತು ಅಂತಾರಾಷ್ಟ್ರೀಯ ಸ್ಮಾರಕಗಳ ನಿರ್ಮಾಣದ ಬೇಡಿಕೆಗಳನ್ನು ಸರ್ಕಾರ  ಈಡೇರಿಸುತ್ತದೆ ಎನ್ನುವ ವಿಶ್ವಾಸವನ್ನು ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘವು ಸೋಮವಾರ ಮಾಗಡಿ ಪಟ್ಟಣದ ಕೋಟೆ ಮೈದಾನದಿಂದ ಕೆಂಪೇಗೌಡರ ಸಮಾಧಿ ಸ್ಥಳವಾದ ಕೆಂಪಾಪುರದವರೆಗೆ ಆಯೋಜಿಸಿದ್ದ `ಕೆಂಪೇಗೌಡರ ಜಾತ್ಯತೀತ  ನಿಲುವಿನೆಡೆಗೆ' ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರವನ್ನು ಹುಟ್ಟು ಹಾಕುವ ಮೂಲಕ ಕರುನಾಡಿನ ಅಸ್ತಿತ್ವಕ್ಕೆ  ಅಡಿಪಾಯ ಹಾಕಿಕೊಟ್ಟಿರುವ ನಾಡಪ್ರಭು ಕೆಂಪೇಗೌಡರ ಕೀರ್ತಿ ಮತ್ತು ಸಾಧನೆಗಳನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜಾರಿಯಾಗಬೇಕು.

500 ವರ್ಷದ ಹಿಂದೆಯೇ ಸಾಮಾಜಿಕ ನ್ಯಾಯ ಪರಂಪರೆ ಹುಟ್ಟು ಹಾಕಿದ, ಜಾತ್ಯತೀತ ನಾಯಕನಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಸರ್ಕಾರದ ಸೂಕ್ತ   ಸಹಕಾರವೂ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೆಂಪೇಗೌಡರ ಹೆಸರಿಡಿ: ಕೆಂಪೇಗೌಡರ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚು ಆಸಕ್ತಿ ಅಗತ್ಯ. 440 ವರ್ಷಗಳ ಬಳಿಕ ಕೆಂಪಾಪುರದಲ್ಲಿ ಪತ್ತೆಯಾದ ಕೆಂಪೇಗೌಡರ ಸಮಾಧಿಯನ್ನು ರಾಜ್‍ಘಾಟ್  ಮಾದರಿ ಅಭಿವೃಧಿಪಡಿಸಬೇಕು. ಕೆಂಪೇಗೌಡರ ದಿನಾಚರಣೆಯನ್ನು ಸರ್ಕಾರ ಆಚರಿಸಬೇಕು. ಬೆಂಗಳೂರಿನ ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡ ಬೇಕು. ಗುಜರಾತ್‍ನಲ್ಲಿ ವಲ್ಲಭಭಾಯಿ  ಪಟೇಲ್ ಪ್ರತಿಮೆ ಸ್ಥಾಪಿಸುತ್ತಿರುವಂತೆ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆಯಾಗಬೇಕು ಎಂದು ಸ್ಫುಟಿಕಪುರಿ ಮಠಾಧೀಶ ಶ್ರೀ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.  ಕೆಂಪೇಗೌಡರನ್ನು ಕುರಿತು ಗಿರೀಶ್ ಕಾರ್ನಾಡ್ ಅವರ ಮಾತುಗಳಿಂದ ಒಕ್ಕಲಿಗರು ಎಚ್ಚೆತ್ತುಕೊಂಡಿದ್ದಾರೆ ಎಂದರೆ ಅದು ತಪ್ಪು ತಿಳವಳಿಕೆಯಾಗುತ್ತದೆ. ಹಾಗೆ ಯಾರೂ ಭಾವಿಸಬೇಕಿಲ್ಲ ಎಂದು  ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಇದು ಕೆಂಪೇಗೌಡರದ್ದೇ: ಕೆಂಪಾಪುರದಲ್ಲಿರುವ ಸಮಾಧಿ ಹಿರಿಯ ಕೆಂಪೇಗೌಡರದ್ದೇ ಎನ್ನುವುದು ಅದರಲ್ಲಿರುವ ಶಾಸನ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಪರಿಣಿತ ಸಂಶೋಧಕರ  ಸಂಶೋಧನೆಯಿಂದ ಸಾಬೀತಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಹೇಳಿದರು. ಕೆಂಪೇಗೌಡ ಒಬ್ಬ ಜಾತ್ಯತೀತ ವಾದಿ. ದೂರದರ್ಶಿತ್ವ ಹೊಂದಿದ ನಾಯಕ.  ಅವರ ಬಗ್ಗೆ ಸಾಕಷ್ಟು ಸಂಶೋಧನೆಗಳು, ಅಧ್ಯಯನಗಳು ನಡೆಯುವುದು ಅಗತ್ಯ. ಅವರು ಬೆಂಗಳೂರು ನಿರ್ಮಿಸಿರುವ ಬಗೆಯೇ ಅವರ ಜಾತ್ಯತೀತ ನಿಲುವನ್ನು ತೋರುತ್ತದೆ ಎಂದು  ಬಣ್ಣಿಸಿದರು.

ಕೆರೆ-ಕಟ್ಟೆ ನಿರ್ಮಾಣ: ಕೆಂಪೇಗೌಡರ ಆಳ್ವಿಕೆಯಲ್ಲಿ ಹಲವಾರು ಕೆರೆ-ಕಟ್ಟೆ, ಕೋಟೆಗಳ ನಿರ್ಮಾಣವಾಗಿದೆ. ನಾಡಿಗೆ ಅವರ ಕೊಡುಗೆ, ಸ್ಮಾರಕಗಳ ಜೀರ್ಣೋದಾಟಛಿರ, ಕಲೆ, ಸಾಹಿತ್ಯ, ಸಹಬಾಳ್ವೆ  ಮತ್ತು ಜನ ಜೀವನದ ವಿಧಾನಕ್ಕೆ ಅವರು ಒತ್ತು ನೀಡಿದ್ದ ಬಗ್ಗೆ ಪ್ರಾಧಿಕಾರದಿಂದ ಅಧ್ಯಯನ ನಡೆಸಬೇಕು ಎಂದು ಅಪ್ಪಾಜಿಗೌಡ ಸಲಹೆ ನೀಡಿದರು. ಪಾದಯಾತ್ರೆಯಲ್ಲಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ವಿವಿಧ ಮಠಾಧೀಶರು, ಒಕ್ಕಲಿಗರ ಸಂಘದ ಪದಾಧಿಕಾರಿಗಳು, ರಾಜಕೀಯಮುಖಂಡರು ಭಾಗವಹಿಸಿದ್ದರು.

ಕೆಂಪೇಗೌಡರನ್ನು ಕುರಿತು ಗಿರೀಶ್ ಕಾರ್ನಾಡ್ ಅವರ ಮಾತುಗಳಿಂದ ಒಕ್ಕಲಿಗರು ಎಚ್ಚೆತ್ತುಕೊಂಡಿದ್ದಾರೆ ಎಂದರೆ ಅದು ತಪ್ಪು ತಿಳವಳಿಕೆಯಾಗುತ್ತದೆ. ಕೆಂಪೇಗೌಡರ ವಿಷಯದಲ್ಲಿ ಸರ್ಕಾರ  ಆಸಕ್ತಿ ವಹಿಸಿ, ಬೇಡಿಕೆಗಳನ್ನು ಈಡೇರಿಸದಿದ್ದರೆ ಪಾದಯಾತ್ರೆ ಬೆಂಗಳೂರಿಗೆ ಸ್ಥಳಾಂತರಗೊಳ್ಳಲಿದೆ.
-ನಂಜಾವಧೂತ ಸ್ವಾಮೀಜಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com