ಬೆಂಗಳೂರು: ರಾಜಭವನದ ಗಾಜಿನಮನೆ ಶುಕ್ರವಾರ ಸಂಜೆಗೆ ಗಾಂಧಿ ನೆನಪಿನ ಅರಮನೆಯಂತಾಗಿತ್ತು. ರಾಜಭವನ, ದೂರದರ್ಶನ, ಸರ್ವೋದಯ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡ ಗಾಂಧಿ ಜಯಂತಿ ಅಹಿಂಸಾ ಮಹೋತ್ಸವ ದಲ್ಲಿ ನೃತ್ಯ ಹಾಗೂ ಗೀತೆಯ ಮೂಲಕ ಗಾಂಧೀಜಿಯವರಿಗೆ ನಮನ ಸಲ್ಲಿಸಲಾಯಿತು.
ರಾಜ್ಯಪಾಲ ವಜುಬಾಯಿ ವಾಲಾ ಅವರು ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಸುವುದರೊಂದಿಗೆ ಆರಂಭವಾದ ವರ್ಣರಂಜಿತ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ತಿನ ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ಜಪಾನ್ ರಾಯಭಾರಿ ಜುನಿಚಿ, ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೋ.ಶ್ರೀನಿವಾಸಯ್ಯ, ಸರ್ವೋದಯ ಸಂಸ್ಥೆಯ ಪಿ.ಎ.ನಜರತ್ ಸೇರಿದಂತೆ ಕಿಕ್ಕಿರಿದು ತುಂಬಿದ್ದ ಗಾಜಿನರಮನೆ ಸಾಕ್ಷಿಯಾಯಿತು. ಲೆಸೆತೊ ಮತ್ತು ಗಿನಿಯಾ ಪ್ರಧಾನಮಂತ್ರಿಯ ವಿಶೇಷ ಸಲಹೆಗಾರ ದೀಪಕ್ ವೊಹರಾ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
ಆರಂಭದಲ್ಲಿ ಫ್ರಾಂಕ್ ಅಂತೋನಿ ಪಬ್ಲಿಕ್ ಶಾಲೆಯ ಮಕ್ಕಳು ವಾದ್ಯಗೋಷ್ಠಿ ನಡೆಸಿಕೊಟ್ಟರು. ನಂತರ ಗಾಂಧೀಜಿಯವರ ಇಷ್ಟದ ಭಜನೆ `ವೈಷ್ಣವ ಜನತೋ...'ವನ್ನು
ಅಂಜಲಿ ಹಳಿಯಾಳ ಪ್ರಸ್ತುತಪಡಿಸಿ ದರು. ಅನಿತಾ ರೆಡ್ಡಿ ನೇತೃತ್ವದ ಜೀವನೋತ್ಸವ ತಂಡವು ನೃತ್ಯಪ್ರದರ್ಶಿಸಿದರು. ದೇಶದ ವಿವಿಧ ರಾಜ್ಯಗಳ ಕಲೆ ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯವನ್ನು ಸುಪರ್ಣ ಮತ್ತು ತಂಡದವರು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆತಂದರು. ಅದೇ ರೀತಿ ಗಾಂಧಿ- ತಾತನ ಸನ್ನಿಧಿಗೊಂದು ಬಾಲಕಿ ಬರೆದ ಪತ್ರ... ಸೇರಿ ವಿವಿಧ ದೇಶ
ಭಕ್ತಿಗೀತೆಗಳ ಗುಚ್ಛವನ್ನು ಸ್ಪರ್ಶ ತಂಡದವರು ಅರ್ಪಿಸಿ ಮೆರಗು ನೀಡಿದರು. ಗ್ರಾಮೀಣ ಜೀವನ ಜಾನಪದವನ್ನು ಪ್ರತಿಬಿಂಬಿಸುವ ನೃತ್ಯವ ನ್ನು ಶ್ರೀಲಂಕಾದ ತಂಡವು ಕೊನೆಯಲ್ಲಿ ಪ್ರದರ್ಶಿಸಿತು. ದೂರದರ್ಶನಕೇಂದ್ರ ಬೆಂಗಳೂರಿನ ಉಪ ಮಹಾ ನಿರ್ದೇಶಕ ಎನ್.ಚಂದ್ರಶೇಖರ್, ವಿಜಯಕುಮಾರ್ ತೋರಗಲ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ. ಉಪಸ್ಥಿತರಿದ್ದರು.
Advertisement