ಎಲ್ಲಾ ಕೊಟ್ಟಿದ್ದೀರಿ, ಭೂಮಿ ಭಾಗ್ಯ ಕೊಡಿ: ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ಎಲ್ಲಾ ಭಾಗ್ಯ ಕೊಟ್ಟಿದ್ದೀರಿ, ಭೂಮಿ ಭಾಗ್ಯ ಕೊಡ್ರಿ, ಅದನ್ನ ನೋಡಿ ಈ ಭೂಮಿಯಲ್ಲಿ ಪ್ರಾಣವನ್ನಾದರೂ ಬಿಡ್ತೀನಿ...
ಹೀಗೆ ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿಗಳಿಗೆ ವೇದಿಕೆಯಲ್ಲಿ ಹೇಳಿದಾಗ ಚಪ್ಪಾಳೆಯ ಸುರಿಮಳೆಯೇ ಬಿದ್ದಿತ್ತು.
ಸಾಗರದ ನೆಹರು ಮೈದಾನದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನ್ವಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ಭಾವೋದ್ವೇಗದಿಂದ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು "ಇಂದು ನನಗೆ ಎದೆ ತುಂಬಿದೆ" ಎಂದರು. ಇದು ಸಾಗರ, ಹೋರಾಟದ ಭೂಮಿ. 25 ವರ್ಷದ ಹೋರಾಟದ ಸಾಧನೆಯಿಂದ ದೇವರಾಜ ಅರಸು ಇಂದಿಗೂ ನಮ್ಮ ಹೃದಯದಲ್ಲಿ ನಿಂತಿದ್ದಾರೆ. ಅನ್ಯಾಯ ಜೈಲು ಹೋರಾಟ ಬೈಲು ಎಂದು ಹೋರಾಟ ಮಾಡಿದವರು ನಾವು. ಭೂಮಿ ಹಕ್ಕು ನೀಡುವಲ್ಲಿ ಮೊದಲು ದೇವರಾಜ ಅರಸು ಎರಡನೆಯವರು ಸಿದ್ದರಾಮಯ್ಯ ಆಗಬೇಕು. ಈ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ಅರಣ್ಯ ಹಕ್ಕು ಕಾನೂನು ಬಂದು 8 ವರ್ಷ ಆಗಿದೆ. ಮುಖ್ಯಮಂತ್ರಿಗಳೇ, ಅಧಿಕಾರಿಗಳು ಈ ಕಾಯ್ದೆಯನ್ನು ಬಹಳ ತಪ್ಪಾಗಿ ಭಾವಿಸಿದ್ದಾರೆ. ಇದೇ ಡಿಸೆಂಬರ್ ಒಳಗೆ ಎಲ್ಲಾ ಅರ್ಜಿ ವಿಲೇವಾರಿ ಮಾಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅರಣ್ಯ ಹಕ್ಕು ಪಡೆಯಲು ಬೇಕಾದ 13 ಸಾಕ್ಷಿಗಳಲ್ಲಿ ಒಂದಕ್ಕಿಂತ ಹೆಚ್ಚು ಸಾಕ್ಷಿಗಳನ್ನು ತೋರಿಸಿದರೆ ಸಾಕು ಅಂತ ಕಾನೂನು ಹೇಳುತ್ತೆ. ಅಧಿಕಾರಿಗಳಿಗೆ ಚಾಟಿ ಏಟು ನೀಡದೇ ಹೋದರೆ ನಿಮ್ಮ ಆದೇಶ ಮಣ್ಣುಮುಕ್ಕಿ ಹೋಗುತ್ತದೆ. ಡಿಸೆಂಬರ್ ಒಳಗಾಗಿ ಎಲ್ಲಾ ಅರ್ಜಿಗಳನ್ನು ತೀರ್ಮಾನ ಮಾಡಬೇಕು ಎಂದು ಕಾಗೋಡು ತಿಮ್ಮಪ್ಪ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ