ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಭಾನುವಾರ ಪರಿಶೀಲನೆ ನಡೆಸುತ್ತಿರುವುದು (ಕೃಪೆ: ಎಕ್ಸ್ ಪ್ರೆಸ್ ಫೋಟೋ)
ಜಿಲ್ಲಾ ಸುದ್ದಿ
ಪಿಎಂ, ಜರ್ಮನಿ ಛಾನ್ಸಲರ್ ಸಂಚರಿಸುವ ಮಾರ್ಗ ಪರಿಶೀಲನೆ
:ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಆಗಮಿಸಲಿರುವುದರಿಂದ, ಅವರು ಸಂಚರಿಸುವ ಮಾರ್ಗವನ್ನು ...
ಬೆಂಗಳೂರು:ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿ ಛಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಆಗಮಿಸಲಿರುವುದರಿಂದ, ಅವರು ಸಂಚರಿಸುವ ಮಾರ್ಗವನ್ನು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಭಾನುವಾರ ಪರಿಶೀಲಿಸಿದರು. ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಹಳೇ ವಿಮಾನ ನಿಲ್ದಾಣ ರಸ್ತೆ, ಕುಮಾರ ಕೃಪಾ ರಸ್ತೆ, ಶಿವಾನಂದ ವೃತ್ತ, ರಾಜಭವನ ರಸ್ತೆ, ರೇಸ್ಕೋರ್ಸ್ ರಸ್ತೆ, ದೊಮ್ಮಲೂರು ರಸ್ತೆ ಸೇರಿದಂತೆ ಹಲವೆಡೆ ಪರಿಶೀಲಿಸಿದ ಅವರು, ರಸ್ತೆಗುಂಡಿ, ರಸ್ತೆಯಲ್ಲಿ ಬಿದ್ದ ಕಸ, ಪಾದಚಾರಿ ಮಾರ್ಗದ ಅವ್ಯವಸ್ಥೆ , ಜಾಹೀರಾತು ಫಲಕ, ಬ್ಯಾನರ್ ಹಾವಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರಿಶೀಲನೆ ವೇಳೆ, ದೊಮ್ಮಲೂರು ವೃತ್ತದಲ್ಲಿ ಹಾಕಿದ್ದ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರ ಚಿತ್ರವಿರುವ ಬ್ಯಾನರ್ ಅನ್ನು ತೆಗೆದುಹಾಕಲಾಯಿತು.
ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಜಲಮಂಡಳಿ ಸಿಬ್ಬಂದಿ ರಸ್ತೆ ಅಗೆದು ಬಿಟ್ಟಿದ್ದರು. ತಕ್ಷಣ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ