ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಸೋಮವಾರ ಬೆಳಗ್ಗೆ ನಡೆದಿದೆ.
ಬಳೇಪೇಟೆ ನಿವಾಸಿ ಸುಂದರಮೂರ್ತಿ ಎಂಬುವರ ಪುತ್ರಿ ಪೂರ್ಣಿಮಾ (17) ಮೃತಪಟ್ಟ ವಿದ್ಯಾರ್ಥಿನಿ. ಮೌಂಟ್ ಕಾರ್ಮೆಲ್ ಕಾಲೇಜಿಗೆ ತೆರಳಲು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7.45ರಲ್ಲಿ ಪೂರ್ಣಿಮಾ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ಸಂಬಂಧ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಮಿಳುನಾಡು ಮೂಲದ ಸುಂದರಮೂರ್ತಿ, ಹಲವು ವರ್ಷಗಳಿಂದ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಬಳೇಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಮೂರ್ತಿ ಅವರು, ಕಾರ್ಯಕ್ರಮಗಳಿಗೆ ಪುಷ್ಪಾಲಂಕಾರ ಕೆಲಸಗಾರರಾಗಿದ್ದಾರೆ. ಮಗಳು ಪೂರ್ಣಿಮಾ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೂರ್ತಿ ಅವರು ಪ್ರತಿ ದಿನ ಮಗಳನ್ನು ಬೈಕ್ನಲ್ಲಿ ಮನೆಯಿಂದ ಕರೆದುಕೊಂಡು ಹೋಗಿ ಮೆಜೆಸ್ಟಿಕ್ನ ಸಂಗಮ್ ಚಿತ್ರಮಂದಿರ ಸಮೀಪ ಡ್ರಾಪ್ ಮಾಡುತ್ತಿದ್ದರು. ಬಳಿಕ ಆಕೆ, ಬಿಎಂಟಿಸಿ ಬಸ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು.
ಸೋಮವಾರ ಕಾಲೇಜಿನಲ್ಲಿ ಪೂರ್ಣಿಮಾಳಿಗೆ ಅರ್ಧ ವಾರ್ಷಿಕ ಪರೀಕ್ಷೆಗಳಿದ್ದವು. ಎಂದಿನಂತೆ ಬೆಳಗ್ಗೆ ಮೂರ್ತಿ ಅವರು, ಸಂಗಮ್ ಚಿತ್ರಮಂದಿರ ಬಳಿ ಮಗಳನ್ನು ಬಿಟ್ಟು ತೆರಳಿದ್ದಾರೆ. ಅಲ್ಲಿಂದ ಗಣಪತಿ ದೇವಾಲಯ ಮೂಲಕ ಪೂರ್ಣಿಮಾ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಳು. ತಿರುವಿನಲ್ಲಿ ಹಲವು ಬಸ್ಗಳು ಕೂಡ ಚಲಿಸುತ್ತಿದ್ದವು. ಚಲಿಸುತ್ತಿದ್ದ ಬಸ್ಗಳ ನಡುವೆ ಪೂರ್ಣಿಮಾ ರಸ್ತೆ ದಾಟುತ್ತಿದ್ದಾಗ ಹೆಣ್ಣೂರು-ಸುಂಕದಕಟ್ಟೆ ಮಾರ್ಗದ ಬಸ್ ಸಹ ಬಂದಿದೆ. ಪ್ರವೇಶ ದ್ವಾರದಲ್ಲಿ ನಿಲ್ದಾಣಕ್ಕೆ ಯೂ ಟರ್ನ್ ತೆಗೆದುಕೊಳ್ಳುವಾಗ ಬಸ್ ಹಿಂದಿನ ಭಾಗ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ. ಆಗ ಪೂರ್ಣಿಮಾಳ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ತಾನೆ ಮಗಳನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಸ್ ಮನೆಗೆ ಮರಳುವಷ್ಟರಲ್ಲಿ ಅಪಘಾತದಲ್ಲಿ ಮಗಳು ಮೃತಪಟ್ಟಿದ್ದಾಳೆ ಎನ್ನುವ ಸುದ್ದಿ ಬರಸಿಡಿಲಿನಂತೆ ಎರಗಿ ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿತ್ತು. ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಪೂರ್ಣಿಮಾಳ ಅಂತಿಮ ದರ್ಶನ ಪಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಾಲೇಜಿನಲ್ಲಿ ಮೌನಾಚರಣೆ: ವಿದ್ಯಾರ್ಥಿನಿ ಆಕಸ್ಮಿಕ ಸಾವಿನಿಂದ ಕಾಲೇಜಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಸಹಪಾಠಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೋಮವಾರ ಕೆಲ ಕಾಲ ಮËನಾಚಾರಣೆ ನಡೆಸಿದರು. ಪೂರ್ಣಿಮಾ ಸ್ನೇಹಿತೆಯರು ಕಣ್ಣೀರಿಟ್ಟರು.
Advertisement