ಬೆಂಗಳೂರು: ಆಕೆ ನೇಪಾಳ ದೇಶದ ಸುಂದರ ಯುವತಿ. ವಯಸ್ಸು 22 ವರ್ಷ. ತನ್ನ ದೇಶದಲ್ಲಿ ಮಾಡೆಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲೇ ಅವಕಾಶ ಅಷ್ಟಕಷ್ಟೇ ಇದ್ದುದರಿಂದ ಭಾರತದಲ್ಲಿ ಮಿಂಚಲು ಬಯಸಿದ್ದಳು. ಮುಂಬೈಗೆ ಬಂದ ಆಕೆಗೆ ಅವಕಾಶಗಳು ಅಂದುಕೊಂಡಂತೆ ದಕ್ಕಲಿಲ್ಲ. ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಕೊಡಿಸುವ ಅಮಿಷ ಒಡ್ಡಿದ ದುರುಳನೊಬ್ಬ ಆಕೆಯನ್ನು ದೈಹಿಕವಾಗಿ ಬಳಸಿಕೊಂಡ. ಅದನ್ನು ವಿಡಿಯೋ ಮಾಡಿ ಬೆದರಿಸಿ ಆಕೆಯನ್ನು ದೇಹದಂಧೆಗೆ ದೂಡಿದ್ದ. ಇದೆಲ್ಲಕ್ಕಿಂತ ಹೆಚ್ಚಿನ ನರಕವನ್ನು ಆಕೆ ನೋಡಿದ್ದು ಬೆಂಗಳೂರಿನಲ್ಲಿ. ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಗುತ್ತಿಗೆದಾರನೊಬ್ಬನಿಂದಾಗಿ ಇಡೀ ಪ್ರಕರಣ ಈಗ ಬೆಳಕಿಗೆ ಬಂದಿದೆ.
ವಾಟ್ಸಪ್ನಲ್ಲಿ ಬುಕಿಂಗ್: ಯುವತಿಯನ್ನು ದೇಹದಂಧೆಗೆ ನೂಕಿದ್ದ ಅನ್ವರ್ ಖಾನ್ ಹಾಗೂ ಇತರರು ವೆಬ್ಸೈಟ್ ಮೂಲಕ ಸಂಪರ್ಕಿಸುವ ವ್ಯಕ್ತಿಗಳಿಗೆ ತನ್ನ ಮೊಬೈಲ್ ನಂಬರ್ ನೀಡುತ್ತಿದ್ದರು. ಬಳಿಕ ಗ್ರಾಹಕರ ಬೇಡಿಕೆ ಹಾಗೂ ಅವರು ಖರ್ಚು ಮಾಡುವ ಹಣಕ್ಕೆ ತಕ್ಕಂತೆ ಯುವತಿಯರ ಫೋಟೋ ತೋರಿಸುತ್ತಿದ್ದರು. ಹೆಚ್ಚು ಹಣ ಖರ್ಚು ಮಾಡಲು ಇಚ್ಛಿಸಿದರೆ ಮಾಡೆಲ್ಗಳಿವರು ಎಂದು ಸುಂದರ ಯುವತಿಯರ ಫೋಟೊಗಳನ್ನು ವಾಟ್ಸಾಪ್ ಮೂಲಕ ಕಳಿಸುತ್ತಿದ್ದ ಅನ್ವರ್. ನಿಮ್ಮೊಂದಿಗೆ ಬರುತ್ತಿರುವ ಯುವತಿ `ಕನ್ಯೆ' ಎಂಬ ಹೇಳಿಕೆಯೂ ಸೇರಿ ಗ್ರಾಹಕ ಮರುಳಾಗುತ್ತಿದ್ದ. ಯುವತಿಯೊಂದಿಗೆ ಕಾಲ ಕಳೆಯಲು ಕನಿಷ್ಠ ರೂ. 30 ಸಾವಿರದಿಂದ ರೂ. 50 ಸಾವಿರ ಶುಲ್ಕವನ್ನು ಅನ್ವರ್ ನೀಡುತ್ತಿದ್ದ ಬ್ಯಾಂಕ್ ಅಕೌಂಟ್ಗೆ ಹಾಕಿದ ನಂತರವೇ ಯುವತಿ ಇರುವ ಹೊಟೇಲ್ ಹೆಸರು ಹಾಗೂ ಕೊಠಡಿ ಸಂಖ್ಯೆಯನ್ನು ಗ್ರಾಹಕರಿಗೆ ಹೇಳಲಾಗುತ್ತಿತ್ತು. ದೇಶದ ಬೇರೆ ಬೇರೆ ನಗರಗಳಲ್ಲಿ ಹೀಗೆ ಬುಕಿಂಗ್ ಮಾಡುತ್ತಿದ್ದ ಆರೋಪಿಗಳು ವಿಮಾನದ ಮೂಲಕ ಯುವತಿಯನ್ನು ಕಳಿಸುತ್ತಿದ್ದರು.
ಕಾರ್ಡ್ ಯಡವಟ್ಟು
ಆತ ಮಾಡಿದ ಒಂದೇ ಒಂದು ಡವಟ್ಟೆಂದರೆ, ಪ್ಯಾಂಟ್ ಹಾಕಿಕೊಳ್ಳುವ ಅವಸರದಲ್ಲಿ ತನ್ನ ಗುರುತಿನ ಚೀಟಿ ಬಿದ್ದುದನ್ನು ಗಮನಿಸಲೇ ಇಲ್ಲ. ಅದ್ಹೇಗೋ ಯುವತಿಯ ದಂಧೆಯ ಸುಳಿವು ಪಡೆದಿದ್ದ ಸಿಸಿಬಿ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿದರು. ಯುವತಿಯನ್ನು ಮಹಿಳಾ ಮಂದಿರಕ್ಕೆ ಕಳಿಸಿ, ಗುರುತಿನ ಚೀಟಿಯ ನೆರವಿನಿಂದ ವಿಟಪುರುಷ ಸುಧನ್ವ (28) ಮತ್ತು ತಲೆಹಿಡುಕ ಅನ್ವರ್ ಅಲಿಯಾಸ್ ಸಾಗರ್ನನ್ನು (27)ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಐಪಿಸಿ ಕಲಂ 377 ಅನ್ವಯ ಕೇಸ್ ದಾಖಲಾಗಿದೆ.
ಅಸಹಜ ಲೈಂಗಿಕ ಕ್ರಿಯೆ: ಕಳೆದ ತಿಂಗಳು ಬೆಂಗಳೂರಿನ ಗುತ್ತಿಗೆದಾರರನೊಬ್ಬ ಇದೇ ವಿಧಾನದಲ್ಲಿ ಈ ನೇಪಾಳಿ ಯುವತಿಯನ್ನು ಬುಕ್ ಮಾಡಿಕೊಂಡಿದ್ದ. ಕ್ರೆಸೆಂಟ್ ರಸ್ತೆಯಲ್ಲಿರುವ ಹೊಟೇಲ್ನಲ್ಲಿದ್ದ ಯುವತಿಯ ಮೇಲೆ ಮೃಗದಂತೆ ಎರಗಿದ್ದ ಸುಧನ್ವ ಎಂಬ ಗುತ್ತಿಗೆದಾರ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಅದಕ್ಕೊಪ್ಪದ ಯುವತಿಗೆ ಥಳಿಸಿ ಬಲವಂತದ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಪರಾರಿಯಾಗಿದ್ದ. ಪ್ರಕರಣದಲ್ಲಿ ನಗರದ ಕೆ.ಆರ್ ಪುರ ಮೂಲದ ರಾಜಾ ಅಲಿಯಾಸ್ ವೆಂಕಟೇಶ್, ಹೊಟೇಲ್ ಬುಕ್ ಮಾಡುತ್ತಿದ್ದ ಮುಂಬೈ ಮೂಲದ ರಾಕೇಶ್, ಬಂಟಿ, ಕಪೂರ್ ಮತ್ತು ಅನೀಷಾ ಎಂಬುವರು ಭಾಗಿಯಾಗಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Advertisement