ಧಾರವಾಡ: ಜಾನುವಾರುಗಳಿಗೆ ವೈರಸ್ಗಳಿಂದ ಬರುವ ಕಾಲುಬಾಯಿ ರೋಗ ತಡೆಯಲು ಪಶು ಸಂಗೋಪನಾ ಇಲಾಖೆ ಸೆ. 8ರಿಂದ ಚುಚ್ಚುಮದ್ದು ನೀಡುವ ಅಭಿಯಾನ ಹಮ್ಮಿಕೊಂಡಿದೆ.
ಕಳೆದ ವರ್ಷ ಈ ಸಮಯದಲ್ಲಿ ರಾಜ್ಯದಲ್ಲಿ ಸುಮಾರು 700 ಜಾನುವಾರುಗಳು ಕಾಲುಬಾಯಿ ರೋಗ ದಿಂದ ಮೃತಪಟ್ಟಿದ್ದವು. ಈ ರೋಗದ ನಿಯಂತ್ರಣಕ್ಕೆ ಪಶು ಸಂಗೋಪನೆ ಇಲಾಖೆ ಕಸರತ್ತು ನಡೆಸಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಪಶು ಸಂಗೋಪನಾ ಇಲಾಖೆ ರೈತರ ಮನೆಗೆ ಹೋಗಿ ಚುಚ್ಚುಮದ್ದು ಹಾಕುವ ಅಭಿಯಾನ ಹಮ್ಮಿಕೊಂಡಿದೆ. 20 ದಿನ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಅಭಿಯಾನ ನಡೆಯಲಿದೆ.
ಏನಿದು ಕಾಲುಬಾಯಿ?
ಕಾಲು ಬಾಯಿ ರೋಗವು ಪಿಕೋರ್ನಾ ಗುಂಪಿಗೆ ಸೇರಿದ ಆಪ್ಲೋ ವೈರಾಣುವಿ ನಿಂದ ಸೀಳು ಗೊರಸುಳ್ಳ ಜಾನುವಾರುಗಳಲ್ಲಿ ಕಾಣುತ್ತದೆ. ಆಕಳು, ಎತ್ತು, ಎಮ್ಮೆ, ಕೋಣ, ಹಂದಿಗಳಲ್ಲಿ ಈ ರೋಗದ ತೀವ್ರತೆ ಹೆಚ್ಚಿರುತ್ತದೆ. ಈ ವೈರಾಣು ದೇಹ ಸೇರಿ ಕೆಲವೇ ಗಂಟೆ ಅಥವಾ 23 ದಿನಗಳಲ್ಲಿ ರೋಗವನ್ನುಂಟು ಮಾಡುತ್ತದೆ. ಇದರಲ್ಲಿ 7 ಬಗೆಯ ವೈರಾಣುಗಳು ಜಾನುವಾರುಗಳನ್ನು ರೋಗದಿಂದ ಬಳಲುವಂತೆ ಮಾಡುತ್ತವೆ. ವೈರಾಣುವಿನಿಂದ ಕಲುಷಿತಗೊಂಡ ವಾತಾವರಣದ ಗಾಳಿ, ನೀರು, ಆಹಾರದ ಮೂಲಕ ದನಗಳಿಗೆ ಹರಡುತ್ತದೆ. ರೋಗಪೀಡಿತ ಜೊಲ್ಲು, ಹಾಲು, ಮಲಮೂತ್ರ ಮತ್ತು ವೀರ್ಯದಲ್ಲಿ ರೋಗಾಣುಗಳಿರುತ್ತವೆ. ಸಾಮಾನ್ಯವಾಗಿ ಫೆಬ್ರವರಿಮಾರ್ಚ್ ಹಾಗೂ ಸೆಪ್ಟೆಂಬರ್ಅಕ್ಟೋಬರ್ ತಿಂಗಳಲ್ಲಿ ಪಶುವಿಗೆ ಪುನರಾವರ್ತಿತವಾಗುವುದರಿಂದ ಈ ಸಮಯದಲ್ಲಿಯೋ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತದೆ ಎಂದು ಪಶುವೈದ್ಯಾಧಿಕಾರಿ ಡಾ. ರಹಮತ್ವುಲ್ಲಾ ಪಿ. ಮಾಹಿತಿ ನೀಡಿದರು.
ಹೇಗೆ ಹರಡುತ್ತದೆ ರೋಗ?
ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಾಗ ವಿಪರೀತ ಜ್ವರ, ಬಾಯಿ ಮತ್ತು ನಾಲಿಗೆ ಮೇಲೆ ಸಣ್ಣ ಗುಳ್ಳೆಗಳು ಒಡೆದು ಹುಣ್ಣಾಗಿರುತ್ತ ವೆ. ಬಾಯಿಯಿಂದ ಧಾರಾಕಾರವಾಗಿ ಜೊಲ್ಲು ಸುರಿಯುತ್ತದೆ. ಗೊರಸುಗಳ ಮಧ್ಯೆ ಹುಣ್ಣು (ಹುಳುಗಳಿರುವ), ಕೆಚ್ಚಲ ಬಾವಿನಿಂದ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೇ, ರೋಗಕ್ಕೆ ತುತ್ತಾದ ಜಾನುವಾರು ಜೀವನವೀಡಿ ನರಳುತ್ತವೆ. ಮೈ ಮೇಲಿನ ತುಪ್ಪಳ ಒರಟಾಗಿ, ಕಡಿಮೆ ಶ್ರಮದಾಯಕ ಕೆಲಸ ಅಥವಾ ನಡಿಗೆಯೂ ಜಾನುವಾರುಗಳು ಏದುಸಿರು ಬಿಡುವಂತೆ ಮಾಡುತ್ತವೆ. ಆಕಳು ಅಥವಾ ಎಮ್ಮೆ ಸರಿಯಾಗಿ ಬೆದೆಗೆ ಬಾರದೇ ಇರಬಹುದು. ಬೆದೆಗೆ ಬಂದರೂ ಗರ್ಭ ಕಟ್ಟುವ ಸಾಧ್ಯತೆಗಳು ಕಡಿಮೆ.
Advertisement