ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ (ಸಂಗ್ರಹ ಚಿತ್ರ)
ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ (ಸಂಗ್ರಹ ಚಿತ್ರ)

ನ್ಯಾ.ಕೆಂಪಣ್ಣ ವರ್ಗಾವಣೆಗೆ ಆಗ್ರಹ

ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ಸರ್ಕಾರ ನೇಮಿಸಿರುವ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರನ್ನು ಪೀಠದಿಂದ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ದೂರುದಾರರು ನಿರ್ಧರಿಸಿದ್ದಾರೆ...
Published on

ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದ  ವಿಚಾರಣೆಗೆ ಸರ್ಕಾರ ನೇಮಿಸಿರುವ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಅವರನ್ನು ಪೀಠದಿಂದ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ದೂರುದಾರರು ನಿರ್ಧರಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ದೂರುದಾರರ ಪರ ವಕೀಲ ದೊರೆರಾಜು, ಅಧ್ಯಕ್ಷ ಪೀಠದ ಮುಂದೆಯೇ ಈ ವಿಚಾರ ಪ್ರಸ್ತಾಪಿಸಿದರು. ಪೀಠದ ನಡೆ ಏಕಪಕ್ಷೀಯವಾಗಿದ್ದು, ನ್ಯಾ.ಕೆಂಪಣ್ಣ ಮತ್ತು ಆಯೋಗದ ಕಾರ್ಯದರ್ಶಿ ಶ್ರೀವತ್ಸ ಕೆದಿಲಾಯ ಅವರನ್ನು ಬದಲಿಸುವಂತೆ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.ಇದಕ್ಕೆ ಸಮ್ಮತಿಸಿದ ನ್ಯಾ. ಕೆಂಪಣ್ಣ, ದೇವರು ನನಗೆ ಬೇಕಾದಷ್ಟು ಕೊಟ್ಟಿದ್ದಾನೆ. ನೀವು ಧಾರಾಳವಾಗಿ ರಿಟ್ ಅರ್ಜಿ ಸಲ್ಲಿಸಿ ಎಂದಿದ್ದಾರೆ.

ವಿಚಾರಣೆ ಆರಂಭವಾದ ಕೂಡಲೇ ವಾದ ಮಂಡಿಸಿದ ಸರ್ಕಾರದ ಪರ ವಕೀಲರು, ನಾವು ಈಗಾಗಲೇ ಸಿಡಿ ಮೂಲಕ ಸಾಕ್ಷ್ಯಗಳನ್ನು ನೀಡಿದ್ದೇವೆ ಎಂದರು. ಬಿಡಿಎ ಆಯುಕ್ತ ಶ್ಯಾಮïಭಟ್ ಅವರೂ ಆಯೋಗದ ಆವರಣಕ್ಕೆ ಅವಸರದಲ್ಲಿ ಬಂದು ನಿಂತರಲ್ಲದೆ, ಇ-ದರ್ಜೆಯಡಿ ಬರುವ 83.8 ಎಕರೆ ಭೂಮಿಯನ್ನು ಹೈಕೋರ್ಟ್ ನಿರ್ದೇಶನದಂತೆಯೇ ಡಿನೋಟಿಫೈ ಮಾಡಿರುವುದಾಗಿ ಐದು ಪುಟಗಳ ವರದಿ ಸಲ್ಲಿಸಿದರು. ಪ್ರತಿವಾದ ಮಂಡಿಸಿದ ದೂರುದಾರರ ಪರ ವಕೀಲ ದೊರೆರಾಜು, ಆಯೋಗ ಏಕಪಕ್ಷೀಯವಾಗಿ ಸರ್ಕಾರಿ ವಕೀಲರೊಂದಿಗೆ ಖಾಸಗಿಯಾಗಿ ಸಮಾಲೋಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ವಿಚಾರಣೆ ಯನ್ನು ಸಮಗ್ರವಾಗಿ ಪುನಾರಂಭ ಮಾಡಬೇಕೆಂದು ಮನವಿ ಮಾಡಿದರು. ಇಂತಹ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾ.ಕೆಂಪಣ್ಣ ಹೇಳಿದರು.

ಇದಕ್ಕೆ ಪ್ರತಿಹೇಳಿಕೆ ನೀಡಿದ ವಕೀಲ ದೊರೆರಾಜು, ನಮಗೆ ಆಕ್ಷೇಪಣೆ ಸಲ್ಲಿಸಲೂ ಬಿಡದಿದ್ದರೆ ಹೇಗ್ದ? ಹೀಗಾಗಿ ನಾನು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇನೆ ಎಂದರು. ದೇವರು ನನಗೆ ಬೇಕಾದಷ್ಟು ಕೊಟ್ಟಿದ್ದಾನೆ. ನೀವು ಧಾರಾಳವಾಗಿ ರಿಟ್ ಅರ್ಜಿ ಸಲ್ಲಿಸಿ ಎಂದು ನ್ಯಾ. ಕೆಂಪಣ್ಣ ಹೇಳುತ್ತಿದ್ದಂತೆಯೇ, ನನ್ನ ಆಕ್ಷೇಪಣೆ ಪೂರ್ಣಗೊಳಿಸಲು ಬಿಡಿ ಎಂದು ಮನವಿ ಮಾಡಿದರು.

ಆಕ್ಷೇಪಣೆ ಸಲ್ಲಿಕೆ ನಂತರ ಇದನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾ. ಕೆಂಪಣ್ಣ ಹೇಳಿದರು. ಸಿಟ್ಟಾದ ವಕೀಲ ದೊರೆರಾಜು, ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಮುಂದಿನ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಲು ನಿಮಗೆ ಮತ್ತೊಂದು ಅವಕಾಶ ನೀಡುತ್ತೇನೆ ಎಂದ ನ್ಯಾ. ಕೆಂಪಣ್ಣ ಉಳಿದದ್ದು ನಿಮಗೆ ಬಿಟ್ಟದ್ದು ಎಂದು ಸೆ.22ಕ್ಕೆ ವಿಚಾರಣೆಯನ್ನು ಮುಂದೂಡಿದರು.

ಸಿಟ್ಟಾದ ವಕೀಲ ದೊರೆರಾಜು
ನ್ಯಾ. ಕೆಂಪಣ್ಣ ಕಾರ್ಯವೈಖರಿಗೆ ದೂರುದಾರ ಪರ ವಕೀಲ ಅಸಮಾಧಾನ ಸರ್ಕಾರಿ ವಕೀಲರ ಜೊತೆ ಸಮಾಲೋಚಿಸಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿರುವ ಆರೋಪ ಅವಸರದಲ್ಲೇ 5 ಪುಟಗಳ ವರದಿ ಸಲ್ಲಿಸಿ ನಡೆದ ಬಿಡಿಎ ಆಯುಕ್ತ ಶ್ಯಾಮ್ ಭಟ್ ಉಳಿದಿದ್ದು ನಿಮಗೇ ಬಿಟ್ಟಿದ್ದು ಎಂದು ವಿಚಾರಣೆ ಮುಂದೂಡಿದ ನ್ಯಾ. ಕೆಂಪಣ್ಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com