ಬೆಂಗಳೂರು: ಮೇಕ್ರಿ ವೃತ್ತದಿಂದ ಎಸ್ಟೀಂ ಮಾಲ್ ವರೆಗಿನ ರಸ್ತೆ ವಿಸ್ತರಣೆ ಕಾರ್ಯ ಮುಂದುವರಿಸುವಂತೆ ರಾಜ್ಯ ಸರ್ಕಾರ, ಬಿಡಿಎ ಮತ್ತು ಬಿಬಿಎಂಪಿಗೆ ಹೈ ಕೋರ್ಟ್ ಮಂಗಳವಾರ ಸೂಚಿಸಿದೆ.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ವಿಷಯ ಸುಪ್ರೀಂ ಕೋಟ್ರ್ ನಲ್ಲಿ ವಿಚಾರಣೆಗೆ ಬಾಕಿ ಇಲ್ಲ. ಸುಪ್ರೀಂ ಕೋರ್ಟ್ ಸಹ ಈ ರಸ್ತೆ ಅಗಲೀಕರಣಕ್ಕೆ ಅನುಮತಿ ನೀಡಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳು ಅಡ್ಡಿಬರುವುದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿತು. ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ವಕೀಲ ಎ.ವಿ. ಅಮರ್ ನಾಥನ್ ಹೈ ಕೋರ್ಟ್ ಗೆ ಸಾರ್ವಜನಿಕ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲಾಗಿದೆ.
ಅಗತ್ಯವಿರುವ ಕಡೆ ಸ್ಕೈವಾಕ್ ನಿರ್ಮಿಸಲಾಗುತ್ತಿದೆ ಎಂದು ಜುಲೈ 20ರಂದು ನಡೆದ ಅರ್ಜಿ ವಿಚಾರಣೆಯಲ್ಲಿ ಬಿಡಿಎ ಹಾಗೂ ಬಿಬಿಎಂಪಿ ವಕೀಲರು ಹೇಳಿಕೆ ಆಧರಿಸಿ ಪೀಠ ಅರ್ಜಿ ಇತ್ಯರ್ಥಪಡಿಸಿತ್ತು. ಆದರೆ, ಕಳೆದ ಆ.24ರಂದು ಮೈಸೂರು ಮಹಾರಾಜ ದಿ. ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿ ಇಂದ್ರಾಕ್ಷಿ ದೇವಿ ಅವರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಿತ್ತು. ರಸ್ತೆ ಅಗಲೀಕರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ವಿಚಾರವನ್ನು ಕೋರ್ಟ್ ಗಮನಕ್ಕೆ ತರಲಾಯಿತು. ಇದರಿಂದ ನ್ಯಾಯಪೀಠ ರಸ್ತೆ ಅಗಲೀಕರಣ ಕಾರ್ಯ ಮುಂದುವರಿಸಲು ಸೂಚಿಸಿತು. ಅಲ್ಲದೆ, ಅರಮನೆ ರಸ್ತೆಯ ಅಕ್ಕಪಕ್ಕದ ಜಮೀನಿನ ಭೂ ಮಾಲೀಕರಿಗೆ ಟಿಡಿಆರ್ ಹಕ್ಕು ನೀಡುವ ವಿಚಾರವನ್ನು ಸುಪ್ರೀಂ ಕೋರ್ಟ್ ಗೆ ಮುಂದೆ ಬಗೆಹರಿಸಬೇಕು. ಈ ವಿಚಾರಕ್ಕೂ ರಸ್ತೆ ಅಗಲೀಕರಣಕ್ಕೆ ಯಾವುದೇ ಸಂಬಂಧವೂ ಇಲ್ಲ ಎಂದು ಸರ್ಕಾರ ಹಾಗೂ ಇಂದ್ರಾಕ್ಷಿ ಪರ ವಕೀಲರಿಗೆ ಸೂಚಿಸಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.
Advertisement