ಚಿತ್ರರಂಗದಲ್ಲಿ ಆಲೋಚನೆಗಳು ಮಾಯ
ಬೆಂಗಳೂರು: ಚಲನಚಿತ್ರ ರಂಗದಲ್ಲಿ ಆರಾಧನಾ ಪರಂಪರೆ ಹೆಚ್ಚಾಗಿ ಆಲೋಚನಾ ಪರಂಪರೆ ಇಲ್ಲದಾಗಿದೆ. ಸಿನಿಮಾ ಮಾದ್ಯಮದ ಉದ್ದೇಶ ಗೊತ್ತಿಲ್ಲದವನಿಗೆ ಸಿನೆಮಾ ಅರ್ಥ ಮಾಡಿಸುವುದು ಕಷ್ಟ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಲನಚಿತ್ರ ರಂಗದ ಸ್ಥಿತಿ ಗತಿ ಮತ್ತು ಮಿತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪ್ರಶಸ್ತಿ ಬಂದ ಸಿನಿಮಾ ಎಂದರೆ ಯಾರಿಗೂ ಅರ್ಥವಾಗುವುದಿಲ್ಲವೇನೋ ಎನ್ನುವ ರೀತಿ ನೋಡುತ್ತಾರೆ. ಸಿನಿಮಾದ ಉದ್ದೇಶ ಆತ ಅರಿತಾಗ ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದರು.
ಬೇರೆ ರಾಜ್ಯಗಳಿಗೆ ಹೋದಾಗ ನಮ್ಮಲ್ಲೂ ಒಳ್ಳೆಯ ಸಿನಿಮಾಗಳು ಬರುತ್ತಿದೆ ಎನ್ನುವ ರೀತಿಯಲ್ಲಿ ಮಾತನಾಡಬೇಕು. ಹಾಗೆಯೇ ನಮ್ಮ ರಾಜ್ಯಕ್ಕೆ ಬಂದಾಗಲೂ ಅದೇ ರೀತಿ ಮಾತನಾಡಬೇಕು. ಬೇರೆ ರಾಜ್ಯದವರಿಗಿಂತ ನಾವು ಕೀಳು ಎನ್ನುವ ಭಾವನೆ ಹುಟ್ಟದಂತೆ ಮಾಡಬೇಕು. ಹಾಗೆಯೇ ನಮ್ಮ ರಾಜ್ಯದವರು ನಮ್ಮದನ್ನು ಸಹನೆಯಿಂದ ನೋಡಿ ಬೇರೆಯದನ್ನು ಅಸಹನೆಯಿಂದ ನೋಡುವ ಪ್ರವೃತ್ತಿ ಬದಲಾಗಬೇಕಿದೆ ನಮ್ಮದನ್ನೂ ಟೀಕಿಸಿದಾಗ ಬದಲಾವಣೆ ಸಾಧ್ಯ ಎಂದು ಹೇಳಿದರು.
ನಟ ಮಂಡ್ಯ ರಮೇಶ್ ಮಾತನಾಡಿ, ಚಿತ್ರ ರಂಗ ಹಿಂದೆ ಹೀಗಿತ್ತು ಈಗ ಹೀಗಿದೆ ಎಂದು ಕೊರಗುವುದು ಬೇಡ ಅದು ಕಾಲಕ್ಕೆ ತಕ್ಕಂತೆ ಇರುತ್ತದೆ. ಎಲ್ಲಾ ಕಾಲಕ್ಕೂ ಎಲ್ಲಾ ಮಾಧ್ಯಮಗಳು ಅನುಭವಿಸುವ ಆತಂಕವನ್ನೇ ರಂಗಭೂಮಿ, ಸಿನಿಮಾಗಳು ಅನುಭವಿಸುತ್ತಿವೆ. ಆದರೆ ನಮ್ಮ ಸಿನಿಮಾ ನೋಡಲು ಜನ ಬರಲ್ಲ ಎಂದು ಸಾರ್ವಜನಿಕರ ಮೇಲೆ ತಪ್ಪು ಹೊರೆಸುವ ಬದಲು ಒಳ್ಳೆ ಸಿನಿಮಾಗಳನ್ನು ನಿರ್ದೇಶಿಸಿ ಎಂದು ಕಿವಿಮಾತು ಹೇಳಿದರು.
ಜಗತ್ತು ನನ್ನ ಕಡೆ ನೋಡುತ್ತಿದೆ ಎಂಬ ಅಹಂ ಬಂದಾಗ ನಮ್ಮ ಅವನತಿ ಕೂಡ ಪ್ರಾರಂಭವಾಗುತ್ತದೆ. ಚಿತ್ರದ ಗುಣಮಟ್ಟ ಹಾಳಾಗುತ್ತದೆ. ಒಬ್ಬನಿಗೆ ಬದುಕು ಎನ್ನುವುದು ಬೆರಗು, ಇನ್ನೊಬ್ಬನಿಗೆ ಪ್ರಶ್ನೆ, ಸಡಗರ ಹೀಗೆಯೇ ಪ್ರತಿಯೊಬ್ಬರ ದೃಷ್ಟಿಕೋನವೂ ಬೇರೆಯ ದ್ದಾಗಿರುತ್ತದೆ. ಚಿತ್ರರಂಗ ಜನಪ್ರಿಯ ಹಾಗೂ ಕಲಾತ್ಮಕ ಎಂದು ವಿಭಜನೆಯಲ್ಲಿ ಪ್ರೇಕ್ಷಕರು ಕೂಡ ವಿಭಜನೆಯಾಗಿದ್ದಾರೆ. ಕೆಲವೊಂದು ಚಿತ್ರಗಳು ನೂಡುವ ರೀತಿಯಲ್ಲೂ ಇರುವುದಿಲ್ಲ. ಎಲ್ಲವೂ ಸುಳ್ಳು ಎಂಬ ಭಾವನೆ ಬಂದುಬಿಡುತ್ತದೆ. ಆದರೆ ಕನಸಿಗೂ ವಾಸ್ತವದ ಲೇಪನ ಇರಬೇಕು ಎಂದರು. ಅಕಾಡೆಮಿಯ ಚಲನಚಿತ್ರ ನಟ ಅಚ್ಯುತಕುಮಾರ್, ಅಕಾಡೆಮಿಯ ಶಶಿಕಾಂತ ಯಡಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ