ಬೆಂಗಳೂರು: ಜರ್ಮನಿಯಲ್ಲಿ ನಾಝಿಗಳಿಂದ ನರಮೇಧಕ್ಕೊಳಗಾದ ಯಹೂದಿಗಳು ಇಂದು ಪ್ಯಾಲೆಸ್ತೀನ್ ರ ಮೇಲೆ ಅಕ್ರಮಣ ಮಾಡುತ್ತಿರುವ ಬಗೆ ಬಹಳ ಕ್ರೂರವಾಗಿದೆ ಎಂದು ಪ್ರಗತಿಪರ ಚಿಂತಕ ಲಕ್ಷ್ಮಿಪತಿ ಕೋಲಾರ ತಿಳಿಸಿದರು.
ಪ್ಯಾಲೆಸ್ತೀನ್ ಫ್ರೀಡಂ ಥಿಯೇಟರ್ ಮತ್ತು ದೆಹಲಿಯ ಜನ ನಾಟ್ಯ ಮಂಚ್ ಫ್ರೀಡಂ ಜಾಥಾ ಜ.13 ರಂದು ಬೆಂಗಳೂರಿಗೆ ಆಗಮಿಸಲಿರುವ ಅಂಗವಾಗಿ ಸಮುದಾಯ ಕರ್ನಾಟಕ ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
10 ವರ್ಷದ ಮಕ್ಕಳನ್ನು ಸಹ ಬಿಡದೇ ನಡೆಸುತ್ತಿರುವ ಆಕ್ರಮಣಕಾರಿ ಹತ್ಯೆ ಮುಂದಿನ ಒಂದು ಜನಾಂಗವನ್ನೇ ನಿರ್ನಾಮ ಮಾಡುವ ಕ್ರಿಯೆಯಾಗಿದೆ. ಅಲ್ಲಿ ನಡೆಯುತ್ತಿರುವುದು ಯುದ್ಧವಲ್ಲ. ಅದೊಂದು ಸಾಮೂಹಿಕ ಕಗ್ಗೊಲೆ. ತಮ್ಮ ತಾಯ್ನಾಡಿನಲ್ಲೇ ತಬ್ಬಲಿಗಳಾಗಿರುವ ಪ್ಯಾಲೆಸ್ತೀನ್ ಜನ ನಡೆಸುತ್ತಿರುವ ಸ್ವಾತಂತ್ರ್ಯ ಹೋರಾಟ ಬೆಂಬಲಿಸಿ ಪ್ಯಾಲೆಸ್ತೀನ್ ಕವನ ವಾಚನ ಮತ್ತು ನೇಮಿಚಂದ್ರರ ಯಾದವ ಶೇಮ್ ಪುಸ್ತಕ ವಾಚನ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯ ರಾಜ್ಯ ಸಹಕಾರ್ಯದರ್ಶಿ ಕೆಎಸ್ ವಿಮಲಾ, ಪ್ಯಾಲೆಸೀನ್ ಜನರು ಎದುರಿಸುತ್ತಿರುವ ಬವಣೆ ಮತ್ತು ಇಸ್ರೇಲ್ ನ ಆಕ್ರಮಣಕಾರಿ ಧೋರಣೆ ಮತ್ತು ಅದಕ್ಕೆ ಕುಮ್ಮಕ್ಕು ಕೊಡುತ್ತಿರುವ ಜಗತ್ತಿನ ಬಲಾಢ್ಯ ಶಕ್ತಿಗಳ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.
Advertisement