ಬೆಂಗಳೂರು: ನಗರದ ಕಾರ್ಪೊರೇಷನ್ ವೃತ್ತದ ಬಳಿಯ ಖಾಸಗಿ ಬ್ಯಾಂಕ್ ಎಟಿಎಂ ಘಟಕದಲ್ಲಿ 2013ರ ನವೆಂಬರ್ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆನಡೆಸಿದ್ದ ಆರೋಪಿಯನ್ನು
ಪೊಲೀಸರು ಇನ್ನೂ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಲಿಲ್ಲವೇಕೆ ಎಂದು ಹೈಕೋರ್ಟ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರನ್ನು ಪ್ರಶ್ನಿಸಿದೆ.
ಅಪ್ರಾಪ್ತೆಯ ಅಪಹರಣ ಆರೋಪಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ. ಮೋಹನ ಎಂ.ಶಾಂತನಗೌಡರ ಹಾಗೂ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠವು ಆಯುಕ್ತರನ್ನು ಪ್ರಶ್ನಿಸಿತು. ಈ ವೇಳೆ ಹೇಬಿಯಸ್ ಕಾರ್ಪಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಖುದ್ದು ಹಾಜರಾಗಿದ್ದ ನಗರ ಪೊಲೀಸ್ ಕಮಿಷನರ್ ಎಂ.ಎನ್.ಮೇಘರಿಕ್, ಅಪ್ರಾಪ್ತೆ ಪ್ರೀತಿಸುತ್ತಿದ್ದ ಯುವಕನೊಂದಿಗೆ ಹೋಗಿದ್ದಾಳೆ ಎಂದು ವಿವರ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಎಟಿಎಂನಲ್ಲಿ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಅನೇಕ ಸಾಕ್ಷ್ಯಗಳು ಸಿಕ್ಕಿವೆ. ಆದರೂ ನೀವು ಅವನನ್ನು ಈತನಕ ಪತ್ತೆಹಚ್ಚಿಲ್ಲ. ಇಂತಹ ಪ್ರಕರಣಗಳಲ್ಲಿ ಯಾಕಿಷ್ಟು ವಿಳಂಬ ಎಂದು ಪ್ರಶ್ನಿಸಿದರು.
Advertisement