ಬೆಂಗಳೂರು: ಬೆಂಗಳೂರು ಜಾನ್ಸನ್ ಮಾರ್ಕೆಟ್ ನ ಚಾಯ್ ವಾಲಾ, ನೀರಿನ ವಾಣಿಜ್ಯೀಕರಣ ವಿರೋಧಿಸಿ ಕಳೆದ 11 ವರ್ಷಗಳಿಂದ ಮೌನವಾಗಿ ಪ್ರತಿಭಟನೆ ನಡೆಸುತ್ತಿರುವ ಮೌನಿ ಬಾಬಾ ಅಮೃತ್ ಹೆಬ್ಬಾಳ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.
ಬುಧವಾರ ನಾಮಪತ್ರ ಸಲ್ಲಿಕೆ ಅಂತಿಮ ದಿನ ಇವರಿಬ್ಬರೂ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಜೆಸಿ ನಗರದ ಬಿಬಿಎಂಪಿ ಕಚೇರಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಚಾಯ್ ಸುರಿದೂ ಸುರಿದೂ ಕಪ್ಪಿಟ್ಟ ಕೈಗಳು, ಕೇವಲ ನಾಲ್ಕೈದು ಬೆಂಬಲಿಗರೊಂದಿಗೆ ಆಗಮಿಸಿದ್ದ ಜಾನ್ಸನ್ ಮಾರ್ಕೆಟ್ ನ ಚಾಯ್ ವಾಲಾ ಹೆಸರು ಸಯ್ಯದ್ ಅಸೀಫ್ ಬುಖಾರಿ, ಚುನಾವಣಾ ಇಡುಗಂಟಿಗೂ ಕಾಸಿಲ್ಲದ ಕೇವಲ ಬೈಟು ಚಾಯ್ ಗೆ .2 ರೂ, ಬ್ಲಾಕ್ ಟಿ ಗೆ 6 ರೂ ಪಡೆದು ಜೀವನ ಸಾಗಿಸುವ ಇವರಿಗೆ ಇದೇನು ಮೊದಲ ಚುನಾವಣೆಯಲ್ಲ. 2010 ರ ಬಿಬಿಎಂಪಿ ಚುನಾವಣೆ, 2013 ರ ವಿಧಾನಸಭಾ ಚುನಾವಣೆ, 2014 ರ ಸಂಸತ್ ಚುನಾವಣೆ, 2015 ರ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಇವರು ಈ ಬಾರಿಯ ಚುನಾವಣೆಗೆ ಹಣ ಹೊಂದಿಸಲು ಮಾಡಿದ ಪರದಾಟವನ್ನು ವಿವರಿಸಿ ಕಣ್ಣೀರಿಡುತ್ತಾರೆ.
ಮತ್ತೊಬ್ಬ ಮೌನಿ ಬಾಬಾ ಅಂಬ್ರೋಸ್ ರದ್ದು ಮತ್ತೊಂದು ಕಥೆ. 2002 ರಲ್ಲಿ ಹರಿಯಾಣದಲ್ಲಿ ಸತ್ತಿದ್ದ ಗೋವೊಂದರ ಚರ್ಮ ಸುಲಿದಿದ್ದ ದಲಿತರ ಹತ್ಯೆ ಮಾಡಿದ್ದನ್ನು ಖಂಡಿಸಿ ಕಾಲಿಗೆ ಚಪ್ಪಲಿ ಹಾಕುವುದನ್ನೇ ಬಿಟ್ಟವರು. ನೀರು ವಾಣಿಜ್ಯೀಕರಣವಾಗುತ್ತಿರುವುದನ್ನು ವಿರೋಧಿಸಿ ನೀರು ಆರುವ ಮುನ್ನ ಎಂದು ಸ್ಲೇಟ್ ನಲ್ಲೇ ಬರೆಯುತ್ತ ಮಾತನ್ನೂ ಬಿಟ್ಟವರು ಈ ಬಾಬ. ಕ್ರಾಂತಿಕಾರಿ ಪುಸ್ತಕಗಳ ಮಾರಾಟದಿಂದ ಬಂದ ಹಣವನ್ನೆಲ್ಲಾ ಸೇರಿಸಿ ಹತ್ತು ಸಾವಿರ ಕಟ್ಟಿ ಈ ಬಾರಿ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
Advertisement