ಮೊದಲೇ ಬಿಜೆಪಿ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದ ಶತೃಘ್ನ ಸಿನ್ಹಾ ಇದೀಗ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ವಿರುದ್ಧ ಅಕ್ಷರಶಃ ಬಂಡಾಯನಾಯಕರಾಗಿ ಮಾರ್ಪಟ್ಟಿದ್ದು, ನೇರವಾಗಿಯೇ ಮೋದಿ ಮತ್ತು ಅಮಿತ್ ಶಾ ನಾಯಕತ್ವವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿನ್ಹಾ, ಯಾವುದೇ ಕಾರಣಕ್ಕೂ ಅಮಿತ್ ಶಾ ಅಡ್ವಾಣಿ ಅವರಿಗೆ ಸರಿಸಮಾನರಾಗಲು ಸಾಧ್ಯವೇ ಇಲ್ಲ. ಅಡ್ವಾಣಿ ಅವರನ್ನು ಉದ್ದೇಶ ಪೂರ್ವಕವಾಗಿ ತೆಗೆದು ಹಾಕಲಾಗಿದ್ದು, ಬಿಜೆಪಿಯಲ್ಲಿನ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ, ನೋವಿನ ಸಂಗತಿ ಮತ್ತು ಬಿಜೆಪಿಯ ನಾಚಿಕೆ ಇಲ್ಲದ ನಡೆಯಾಗಿದೆ ಎಂದು ಹೇಳಿದ್ದಾರೆ.