ನಾನೂ 'ಜೈ ಶ್ರೀರಾಮ್ 'ಎಂದು ಘೊಷಣೆ ಕೂಗುವೆ, ತಾಕತ್ತಿದ್ದರೆ ನನ್ನನ್ನೂ ಬಂಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಝರಗ್ರಾಮ್(ಪಶ್ಚಿಮ ಬಂಗಾಳ): ನಾನೂ 'ಜೈ ಶ್ರೀರಾಮ್' ಎಂದು ಘೊಷಣೆ ಕೂಗುವೆ, ತಾಕತ್ತಿದ್ದರೆ ನನ್ನನ್ನೂ ಬಂಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಮಮತಾ ಬ್ಯಾನರ್ಜಿ ಘಾತಲ್ ಲೋಕಸಭೆ ಕ್ಷೇತ್ರದಲ್ಲಿ ಬೆಂಗಾವಲು ಪಡೆಯೊಂದಿಗೆ ಸಾಗುವಾಗ "ಜೈ ಶ್ರೀರಾಮ್" ಘೋಷಣೆ ಕೂಗಿದ್ದ ಮೂವರು ಗ್ರಾಮಸ್ಥರನ್ನು ಶನಿವಾರ ಪೋಲೀಸರು ಬಂಧಿಸಿದ್ದರು. ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕೆಲವು ಗ್ರಾಮಸ್ಥರು ಶನಿವಾರ ಮಧ್ಯಾಹ್ನದ ವೇಳೆ "ಜೈ ಶ್ರೀರಾಮ್" ಘೋಷಣೆ ಮೊಳಗಿಸಿದ್ದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
"ಜೈ ಶ್ರೀರಾಮ್' ಎಂದದ್ದಕ್ಕಾಗಿ ದೀದಿ (ಮಮತಾ ಬ್ಯಾನರ್ಜಿ) ಜನರನ್ನು ಜೈಲಿಗೆ ಹಾಕಿದ್ದಾರೆ. ಒಂದೊಮ್ಮೆ ಇಂದು ನಾನಿಲ್ಲಿ ಜೈ ಶ್ರೀರಾಮ್ ಎಂದು ಘೊಷಣೆ ಕೂಗಿದರೆ ಆಕೆ ನನ್ನನ್ನೂ ಜೈಲಿನೊಳಗೆ ತಳ್ಳಬಹುದು. ಈ ಪ್ರಕಾರವಾಗಿ ಬಂಗಾಳದ ಜನರಿಗೆ ಟಿಎಂಸಿ ಸರ್ಕಾರ ರಕ್ಷಣೆ ನಿಡುತ್ತಿದೆ"
ಲೋಕಸಭೆ ಚುನಾವಣೆ ಹಿನ್ನೆಲೆ ಇಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮೋದಿ ಮಾತನಾಡುತ್ತಿದ್ದರು. ಅವರು ರಾಮಾಯಣ ಹಾಗೂ ಮಹಾಭಾರತದ ಕುರಿತು "ಅವಹೇಳನಕಾರಿ" ಹೇಳಿಕೆ ನೀಡಿದ್ದ ಸಿಪಿಐ(ಎಂ) ಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕುರಿತಂತೆಯೂ ಕಿಡಿ ಕಾರಿದ್ದಾರೆ."ಕಮ್ಯುನಿಸ್ಟರು ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸುವುದು ಅದೊಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ" ಅವರು ಹೇಳಿದರು.
ಯೆಹೂರಿ ಇತ್ತೀಚೆಗೆ ಧಾರ್ಮಿಕ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಹಿಂಸೆಯನ್ನೇ ವೈಭವೀಕರಿಸಿದೆ ಎಂದಿದ್ದರು.
"ದೀದಿ ಮುಂದಿನ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ, ಅದಕ್ಕಾಗಿ ಮಹಾಘಟಬಂಧನ್ ನಲ್ಲಿ ತಮ್ಮ ಸ್ಥಾನವನ್ನು ಮುಂಚೂಣಿಯಲ್ಲಿರಿಸಿದ್ದಾರೆ. ಆದರೆ ಅವರ ಕನಸು ಇದಾಗಲೇ ಠುಸ್ಸಾಗಿದೆ, ಬಂಗಾಳದಲ್ಲಿ ದೀದಿಗೆ 10 ಸ್ಥಾನಗಳನ್ನು ಸಹ ಪಡೆಯಲಾಗುವುದಿಲ್ಲ" ಮೋದಿ ಹೇಳಿದ್ದಾರೆ.