ಪಂಜಾಬ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘ - ಆರ್ ಎಸ್ ಎಸ್ ಜನರು ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡಿರಲಿಲ್ಲ , ಬದಲಿಗೆ ಬ್ರಿಟಿಷರಿಗೆ ಚಮಾಚಗಿರಿಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಬತಿಂದಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ವಾತಂತ್ರಕ್ಕಾಗಿ ಇಡೀ ಪಂಜಾಬ್ ತೊಡಗಿಸಿಕೊಂಡಿದ್ದರೆ ಆರ್ ಎಸ್ ಎಸ್ ಜನರು ಬ್ರಿಟಿಷರ ಚಮಾಚಗಿರಿ ಮಾಡುತ್ತಿದ್ದರು. ಸ್ವಾತಂತ್ರಕ್ಕಾಗಿ ಅವರು ಹೋರಾಟ ಮಾಡಿಲ್ಲ ಎಂದರು.
ಮೋದಿ ಸರ್ಕಾರ ಹಾಗೂ ಹಿಂದಿನ ಅಕಾಲಿ ದಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, ರಾಷ್ಟ್ರ, ರಾಜ್ಯ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳನ್ನು ಸೋಲಿಸಬೇಕೆಂದು ಜನರಿಗೆ ಕರೆ ನೀಡಿದರು.
ರೈತರಿಗಾಗಿ ಪ್ರಧಾನಿ ಮೋದಿ ಏನನ್ನೂ ಮಾಡಿಲ್ಲ, ಬಿಜೆಪಿ ಆಡಳಿತಾವಧಿಯಲ್ಲಿ ಕೃಷಿ ಸಾಲದಿಂದ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪ್ರಣಾಳಿಕೆಯನ್ನು ಓದುವಂತೆ ಜನರಿಗೆ ತಿಳಿಸಿದರು.
ಪಂಜಾಬ್ ನಲ್ಲಿನ 13 ಲೋಕಸಭಾ ಕ್ಷೇತ್ರಗಳಿಗೆ ಮೇ 19 ರಂದು ಏಳನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೇ 23 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
Advertisement