ಜೆಡಿಎಸ್ ಮೇಲಿನ ಅಪನಂಬಿಕೆಯಿಂದಾಗಿ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲಿಲ್ಲ: ಮೋದಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಭಾರತದಲ್ಲಿ ಸ್ಪರ್ಧೆ ಮಾಡುವಂತಿದ್ದರೆ ಕರ್ನಾಟಕದಲ್ಲಿ ಕಣಕ್ಕಿಳಿಯಬಹುದಿತ್ತು. ಆದರೆ ಅವರಿಗೆ ಮೈತ್ರಿ ಪಕ್ಷ ಜೆಡಿಎಸ್ ಮೇಲೆ ಅಪನಂಬಿಕೆ....
ಮೈಸೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮೋದಿ ಭಾಷಣ
ಮೈಸೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮೋದಿ ಭಾಷಣ
ಮೈಸೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಭಾರತದಲ್ಲಿ ಸ್ಪರ್ಧೆ ಮಾಡುವಂತಿದ್ದರೆ ಕರ್ನಾಟಕದಲ್ಲಿ ಕಣಕ್ಕಿಳಿಯಬಹುದಿತ್ತು. ಆದರೆ ಅವರಿಗೆ ಮೈತ್ರಿ ಪಕ್ಷ ಜೆಡಿಎಸ್ ಮೇಲೆ ಅಪನಂಬಿಕೆ ಇದ್ದ ಕಾರಣ ಕೇರಳ ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏ.09 ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಅಪಾರ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸುರಕ್ಷಿತ ಕ್ಷೇತ್ರಗಳ ಹುಟುಕಾಟದಲ್ಲಿದ್ದರು ಆದರೆ ಈ ಹಿಂದೆ ದೇವೇಗೌಡರ ನೇತೃತ್ವದ ತೃತೀಯ ರಂಗ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ವಾಪಸ್ ಪಡೆದ ಕಾರಣದಿಂದ ರಾಹುಲ್ ಗಾಂಧಿ ಅವರಿಗೆ ಜೆಡಿಎಸ್ ಮೇಲೆ ನಂಬಿಕೆ ಬರಲಿಲ್ಲ ಎಂದು ಹೇಳಿದರು.
“ರಾಹುಲ್ ಗಾಂಧಿ ಕರ್ನಾಟಕದಿಂದ ಯಾಕೆ ಸ್ಪರ್ಧೆ ಮಾಡಲಿಲ್ಲ ಎಂದರೆ, ಅವರಿಗೆ ಜನರ ಮನಸ್ಥಿತಿ ಅರ್ಥವಾಗಿತ್ತು. ಜತೆಗೆ  ಜೆಡಿಎಸ್ ಮೇಲೆ ಅನುಮಾನವೂ ಇತ್ತು. ಆ ಕಾರಣಕ್ಕಾಗಿ ಸ್ಪರ್ಧಿಸಲಿಲ್ಲ. ಕೇರಳದತ್ತ ತೆರಳಿದ್ದಾರೆ”. ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಘೊಷಣಾ ಪತ್ರಗಳ ನಡುವೆ ತೀರಾ ಅಂತರವಿದೆ. ಕಾಂಗ್ರೆಸ್ ನದ್ದು ಸುಳ್ಳಿನ ಪ್ರಣಾಳಿಕೆ. ಆದರೆ ಬಿಜೆಪಿ ಪ್ರಣಾಳಿಕೆ ವಾಸ್ತವಿಕತೆಯಿಂದ ಕೂಡಿದೆ. ಕಾಂಗ್ರೆಸ್ ಬಡತನ ನಿರ್ಮೂಲನೆಯನ್ನು ಎಷ್ಟು ವರ್ಷಗಳಿಂದ ಮಾಡುತ್ತಿದೆ?. ಬಡವರು ಇದೀಗ ಕಾಂಗ್ರೆಸ್ ನ್ನೇ ಹೊಡೆದೋಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಹಠಾವ್ ಆದರೆ ಬಡತನ ನಿರ್ಮೂಲನೆಯಾಗಲಿದೆ ಎಂದರು. 
ಬಿಜೆಪಿ ಪ್ರಣಾಳಿಕೆ ನಮ್ಮ ಸೇನೆಯನ್ನು ಇನ್ನಷ್ಟು ಸದೃಢಗೊಳಿಸುತ್ತದೆ. ನವ ಭಾರತದಲ್ಲಿ ನವ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಸಂಕಲ್ಪವಾಗಿದೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ವಿಮಾನ ನಿಲ್ದಾಣಗಳು, ದೇಶದಲ್ಲಿನ ವೈದ್ಯರ ಸಂಖ್ಯೆ ದ್ವಿಗುಣಗೊಳಿಸುತ್ತೇವೆ. ಉದ್ಯಮಿಗಳಿಗೆ ಯಾವುದೇ ಖಾತರಿ ಇಲ್ಲದೇ ಸಾಲ ನೀಡಲಾಗುವುದು. ಐದು ಲಕ್ಷ ರೂವರೆಗೆ ಯಾವುದೇ ತೆರಿಗೆ ವಿಧಿಸಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಶಿಕ್ಷಣ, ಗೃಹ, ಮತ್ತಿತರ ತೆರಿಗೆ ಹೆಚ್ಚಿಸಿತ್ತು. ಇದೀಗ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ ಎಂದರು. 
ಕಾಂಗ್ರೆಸ್ 2ಜಿ ಹಗರಣ ಮಾಡಿದರೆ ನಾವು ಕಡಿಮೆ ದರದ ಸ್ಮಾರ್ಟ್ ಫೋನ್, ಕಡಿಮೆ ಮೊತ್ತದ ಇಂಟರ್ ನೆಟ್ ಸೌಲಭ್ಯ ಕಲ್ಪಿಸಿದ್ದೇವೆ. ದೇಶದ ರಕ್ಷಣೆ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದ್ದು, ನಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ ನಮ್ಮನ್ನು ಬೆಂಬಲಿಸಿ. ಕರ್ನಾಟಕದಲ್ಲೂ ಹೊಸ ವಿಕ್ರಮ ಸ್ಥಾಪಿಸಲಾಗುವುದು. ನಿಮ್ಮ ಪ್ರತಿಯೊಂದು ಮತ ಈ ಚೌಕಿದಾರನನ್ನು ಸಶಕ್ತಗೊಳಿಸಲಿದೆ ಎಂದರು. 
ಕಾಂಗ್ರೆಸ್ ಕೇವಲ ಮೋದಿ ಓಡಿಸಿ, ಮೋದಿ ಓಡಿಸಿ ಎನ್ನುತ್ತಿದೆ. ಆದರೆ ಇಲ್ಲಿನ ಜನ ಸಾಗರ ಮೋದಿ, ಮೋದಿ ಎಂದು ಕೂಗಿದ ಪ್ರೀತಿಯೇ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಕಾಂಗ್ರೆಸ್, ಇಲ್ಲಿನ ಮುಖ್ಯಮಂತ್ರಿಯನ್ನು ಪಂಚಿಂಗ್ ಬ್ಯಾಗ್ ರೀತಿ ಬಳಸಿಕೊಳ್ಳುತ್ತಿದೆ. ಇದನ್ನು ಇಡಿ ದೇಶ ನೋಡುತ್ತಿದೆ. ಇಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ ಎಂದು ಮೋದಿ ಟೀಕಿಸಿದರು. 
ಶಬರಿಮಲೆ ಸೇರಿದಂತೆ ಈ ದೇಶದೊಳಗೆ ಇರುವ ಭಾವನೆಯೇ ಬಿಜೆಪಿ ಭಾವನೆಯಾಗಿದೆ. ಇಂತಹ ವಿಚಾರಗಳಿಗೆ  ಸಂವಿಧಾನದ ರಕ್ಷಣೆ ಸಿಗಲೇಬೇಕು. ಶಬರಿಮಲೆ ವಿಚಾರದಲ್ಲಿ ಯಾವ ರೀತಿ ಬೆಳವಣಿಗೆಯಾಯಿತು, ಎಡಪಂಥೀಯ ನಾಯಕರಿಗೆ ಕಾಂಗ್ರೆಸ್ ಹೇಗೆ ಬೆಂಬಲ ನೀಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನದೊಳಗೆ ನುಸುಳಿ ದಾಳಿ ಮಾಡಿದಾಗ ಇದಕ್ಕೆ ಸಾಕ್ಷಿ ಕೇಳಲು ಕಾಂಗ್ರೆಸ್ಸಿಗರು ಆರಂಭಿಸಿದರು. ನಿಮಗೆ ಸೇನೆ ಮೇಲೆ ಭರವಸೆ ಇದೆಯೋ, ಇಲ್ಲವೋ ಎಂದು ಪ್ರಶ್ನಿಸಿದರು. 
ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಯ ಜನರೇ, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಮೊದಲಿಗೆ ಮಾತು ಆರಂಭಿಸಿದ ಮೋದಿ, ಚಾಮುಂಡೇಶ್ವರಿಯ ಈ ಭೂಮಿಯಿಂದ ಎಲ್ಲ ಮತದಾರರಿಗೆ, ಸರ್. ಎಂ. ವಿಶ್ವೇಶ್ವರಯ್ಯ ಅಂತಹ ಮಹನೀಯರಿಗೂ ನಮಿಸುತ್ತೇನೆ ಎಂದರು.  
ಮೈಸೂರಿಗೆ ಈ ಮೊದಲೂ ಬಂದಿದ್ದೆ, ಆದರೆ ಇಷ್ಟೊಂದು ಇಂಥ ಜನಸಾಗರ ನೋಡಿರಲಿಲ್ಲ. ಕೇಂದ್ರ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಪಾಸ್ ಪೋರ್ಟ್ ಕೇಂದ್ರದಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿ ವರೆಗೆ ಹತ್ತಾರು ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಬಡವರಿರಲಿ, ದೀನದಲಿತರಿರಲಿ ಪ್ರತಿಯೊಬ್ಬರ ವಿಕಾಸವೇ ನಮ್ಮ ಮಂತ್ರ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತಿತರ ಹಿರಿಯ ಮುಖಂಡರು, ಬಿಜೆಪಿ ಅಭ್ಯರ್ಥಿಗಳು ವೇದಿಕೆ ಮೇಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com