ಯಾರಿಗೆ ಒಲಿಯಲಿದೆ ಸಕ್ಕರೆ ನಾಡಿನ ಗದ್ದುಗೆ: ಅಂಬರೀಷ್ ಪ್ರೀತಿಗೋ? ದೇವೇಗೌಡರ ಶಕ್ತಿಗೋ?

ದೇಶದ ಹೈವೋಲ್ಟೇಜ್‌ ಕಣ ಎಂದೇ ಹೆಸರಾಗಿರುವ ಮಂಡ್ಯದಲ್ಲಿ ಜನಪ್ರಿಯ ನಟ ಅಂಬರೀಷ್ ಪತ್ನಿಗೆ, ಅಭಿಮಾನಿಗಳು, ರೈತರು, ಮತ್ತು ಬಿಜೆಪಿ ...
ಅಂಬರೀಷ್ ಮತ್ತು ದೇವೇಗೌಡ
ಅಂಬರೀಷ್ ಮತ್ತು ದೇವೇಗೌಡ
ಮಂಡ್ಯ: ಇಬ್ಬರು ಹೊರಗಿನವರು ಮಂಡ್ಯದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಲು ಸಿದ್ದತೆ ನಡೆಸಿದ್ದಾರೆ. ದೇಶದ ಹೈವೋಲ್ಟೇಜ್‌ ಕಣ ಎಂದೇ ಹೆಸರಾಗಿರುವ ಮಂಡ್ಯದಲ್ಲಿ ಜನಪ್ರಿಯ ನಟ ಅಂಬರೀಷ್ ಪತ್ನಿಗೆ, ಅಭಿಮಾನಿಗಳು, ರೈತರು, ಮತ್ತು ಬಿಜೆಪಿ ಬೆನ್ನುಲುಬಾಗಿ ನಿಂತಿದೆ.
ಇನ್ನೂ ಸ್ವತಃ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಜೆಡಿಎಸ್ ಶಾಸಕರ ಜೊತೆ ಇಡೀ ಮಂತ್ರಿ ಮಂಡಲವೇ ಮಂಡ್ಯದಲ್ಲಿ ಠಿಕಾಣಿ ಹೂಡಿದೆ. 
ಸಕ್ಕರೆ ನಾಡು ಮಂಡ್ಯದ ಮೇಲೆ ಇಡೀ ಇಂಡಿಯಾದ ಗಮನ ನೆಟ್ಟಿರುವು ಅಚ್ಚರಿಯೇನಲ್ಲ, ದೇವೇಗೌಡರ ಕುಟುಂಬ ಹಾಗೂ ಹಿರಿಯ ನಟ ಅಂಬರೀಶ್ ವಂಶದ ನಡುವೆ ನಡೆಯುತ್ತಿರುವ ಫೈಟ್ ಇದಾಗಿದೆ, ದುರಾದೃಷ್ಟವಶಾತ್ ಎರಡು ಅಭ್ಯರ್ಥಿಗಳ ಪ್ರಚಾರದಲ್ಲಿ ಪ್ರಚಲಿತ ಸಮಸ್ಯೆಗಳನ್ನು ಗಂಬೀರವಾಗಿ ತೆಗೆದುಕೊಂಡಿಲ್ಲ, ರೈತರ ಆತ್ಮಹತ್ಯೆ, ಕಾರ್ಮಿಕರ ವಲಸೆ, ಕಬ್ಬಿಗೆ ಸೂಕ್ತ ಬೆಲೆ ಇದ್ಯಾವುದರ ಬಗ್ಗೆಯೂ ಎಲ್ಲಿಯೂ ಚರ್ಚೆಯಾಗಲಿಲ್ಲ, ಕೇವಲ ವಯಕ್ತಿಕ ನಿಂದನೆ, ಪ್ರತಿಷ್ಠೆಯನ್ನು ಪರಿಗಣಿಸಲಾಗಿದೆ.
ಇದೇ ವೇಳೆ ಬೇಸಿಗೆಯಲ್ಲೂ ಕೂಡ ಕಾಲುವೆಗಳಲ್ಲಿ ನೀರು ಯಥೇಚ್ಛವಾಗಿ ಹರಿಯುತ್ತಿದೆ,ಕಳೆದ ಐದು ಬೇಸಿಗೆಗಳಲ್ಲಿ ನೊಂದಿದ್ದ ರೈತರು ಈ ಬಾರಿ ಖುಷಿಯಾಗಿದ್ದಾರೆ, ಹೆಚ್ಚಿನ ರೈತರು ಭತ್ತ ಮತ್ತು ಕಬ್ಬು ಕೃಷಿ  ಮಾಡಿದ್ದಾರೆ.ನೀರಾವರಿ ಇಲಾಖೆ ಕಳೆದ 10 ದಿನಗಳ ಹಿಂದೆ ಕೆಆರ್ಎಸ್ ಜಲಾಶಯದಿಂದ 3,800 ಕ್ಯೂಸೆಕ್ಸ್ ನೀರನ್ನು ರಿಲೀಸ್ ಮಾಡಿದ್ದಾರೆ.
ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಕಚ್ಚಾಡುವುದು ಸಾಮಾನ್ಯ, ಆದರೆ ಜೀವನ ತುಂಬಾ ಮುಖ್ಯ ಎಂದು ರೈತರೊಬ್ಬರು ಹೇಳಿದ್ದಾರೆ.
ಒಕ್ಕಲಿಗರೇ ಅಧಿಕವಾಗಿರುವ ಮಂಡ್ಯದಲ್ಲಿ ಈ ಹಿಂದೆ ಅಂಬರೀಷ್ ಗೆದ್ದು ಸಂಸದರಾಗಿ ನಂತರ ಕೇಂದ್ರ ಸಚಿವರು ಆಗಿದ್ದರು,  ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ನ ಟಾಪ್ ನಟರು ಬಂದು ಪ್ರಚಾರ ನಡೆಸಿದ್ದಾರೆ, ಮಂಡ್ಯದಲ್ಲಿ ಮಹಾಘಟಬಂಧನ ಮಾಡುವಲ್ಲಿ ಸುಮಲತಾ ಯಶಸ್ವಿಯಾಗಿದ್ದಾರೆ, ಅಸಮಾಧಾನ ಗೊಂಡ ಕಾಂಗ್ರೆಸ್, ಜೆಡಿಎಸ್ ನಾಯಕರು, ಬಹಿರಂಗವಾಗಿಯೇ ಸುಮಲತಾ ಗೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಬೆನ್ನಿಗೆ ನಿಂತಿದೆ, ರಾಜ್ಯ ರೈತ ಸಂಘ ಕೂಡ ಸುಮಲತಾ ಹಿಂದಿದೆ.
ಪ್ರಭಾವಿ ಲಿಂಗಾಯತ ನಾಯಕ ಬಿ.ಎಸ್ ಯಡಿಯೂರಪ್ಪ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ನ ಉನ್ನತ ನಾಯಕರು ಮೇಲ್ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ, ಆದರೆ ತಳ ಮಟ್ಟದ ಕಾರ್ಯಕರ್ತರು ನಮ್ಮ ಅಮ್ಮನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸುಮಲತಾ ಪುತ್ರ ಅಭಿಷೇಕ್ ಹೇಳಿದ್ದಾರೆ.
ತಮ್ಮ ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಕುಮಾರಸ್ವಾಮಿ ಎಮೋಷನಲ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ,  ಮಂಡ್ಯ ಜನತೆ ಪ್ರೀತಿ ಗಳಿಸಿದ್ದ ಅಂಬರೀಷ್ ಹೆಸರಲ್ಲಿ ಸುಮಲತಾ ಮತಯಾಚಿಸುತ್ತಿದ್ದಾರೆ, ಇದೇ ವೇಳೆ ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರು ಕಾವೇರಿ ಹೋರಾಟ ಹಾಗೂ ಮಂಡ್ಯ ರೈತರ ಪರವಾಗಿ ನಡೆಸಿದ ಹೋರಾಟಗಳು ಮತ್ತು ಮಂಡ್ಯ ರೈತರ ಜೊತೆಗಿರುವ ಭಾವಾನಾತ್ಮಕ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.
ಮೈತ್ರಿ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸಿದ್ದ ಹಲವು ಕಾಂಗ್ರೆಸ್ ನಾಯಕರನ್ನು ಪಕ್ಷದ ಪರವಾಗಿ ಕೆಲಸ ಮಾಡುವಲ್ಲಿ ಕುಮಾರ ಸ್ವಾಮಿ ಮತ್ತು ಶಿವಕುಮಾರ್ ಯಶಸ್ವಿಯಾಗಿದ್ದಾರೆ,. 8 ಜನ ಜೆಡಿಎಸ್ ಶಾಸಕರು, ಮಂಡ್ಯದಲ್ಲಿ ನಿಖಿಲ್ ಕುಮಾರ್ ಗೆಲ್ಲಿಸಲು ಶತಾಯಗತಾಯ ಹೋರಾಡುತ್ತಿದ್ದಾರೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಸುಮಲತಾ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.
 ಕುರುಬ ಮತ್ತು ಅಹಿಂದ ಮತಗಳು ಜೆಡಿಎಸ್ ಗೆ ವರ್ಗಾವಣೆಯಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದ್ದಾರೆ, ರೈತರ ಸಾಲಮನ್ನಾ ಮಾಡಿರುವುದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಾಯಲವಾಗುತ್ತದೆ ಎಂದು ಹೇಳಲಾಗಿದೆ, ಆದರೆ ಇನ್ನೂ ಕೆಲವು ರೈತರಿಗೆ ಸಾಲಮನ್ನಾದ ಉಪಯೋಗ ಆಗಲೇ ಇಲ್ಲ ರೈತ ಸಂಘದ ನಾಯಕ ನಂಜಂಡೇಗೌಡ ಹೇಳಿದ್ದಾರೆ,
ಮಂಡ್ಯದಿಂದ ತಮ್ಮ ಪುತ್ರನನ್ನು ಗೆಲ್ಲಿಸುವುದು ಸಿಎಂ ಕುಮಾರಸ್ವಾಮಿಗೆ ಪ್ರತಿಷ್ಠೆ ವಿಷಯವಾಗಿದೆ.ಒಂದು ವೇಳೆ ಸೋತರೇ ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆ, ಮಂಡ್ಯದಲ್ಲಿ ನೆಲೆವೂರಲು ಹವಣಿಸುತ್ತಿರುವ ಬಿಜೆಪಿಗೆ ಸುಮಲತಾ ಗೆಲ್ಲಲೇಬೇಕಾದ ಸ್ಥಿತಿಯಿದೆ, ಜನರ ಒಲವು ಜೆಡಿಎಸ್ ಪರವಾಗಿದೆ ಎಂದು ಸಾಬೀತಾಗಬೇಕಾದರೇ ನಿಖಿಲ್ ಗೆಲ್ಲುವುದು ಅನಿವಾರ್ಯವಾಗಿದೆ, 
ಅಂಬರೀಷ್  ಅವರ ನಾಯಕತ್ವವನ್ನು ಮುಂದುವರಿಸಲು ಹಾಗೂ ತಮ್ಮ ಸಾಮರ್ಥ್ಯ ತೋರಿಸಲು ಸುಮಲತಾ ಗೆಲ್ಲಲೇಬೇಕಾದ ಅವಶ್ಯಕತೆಯಿದೆ, ಮಂಡ್ಯದಲ್ಲಿ ನಾಳೆ ಮತದಾನವಿದ್ದು, ಮತದಾರ ಯಾರ ಕೊರಳಿಗೆ ಗೆಲುವಿನ ವಿಜಯಮಾಲೆ ಹಾಕುತ್ತಾನೆ ಎಂಬುದನ್ನು ನೋಡಲು  ಮೇ 23 ರವರೆ ಕಾಯಲೇಬೇಕಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com