ಬೆಂಗಳೂರು: ಮಂಡ್ಯದಲ್ಲಿ ಜೆಡಿಎಸ್ ನಿಂದ ಹಣ ಹಂಚಿಕೆ ವಿಚಾರವಾಗಿ ಸಂಸದ ಎಲ್.ಆರ್.ಶಿವರಾಮೇಗೌಡ ಪುತ್ರ ಚೇತನ್ಗೌಡ ಮತ್ತು ಜೆಡಿಎಸ್ ಮಾಜಿ ಮುಖಂಡ ಪಿ.ರಮೇಶ್ ಎಂಬುವರ ನಡುವೆ ನಡೆದಿದೆ ಎನ್ನಲಾದ 150 ಕೋಟಿ ರೂ. ಸಂಭಾಷಣೆ ಕುರಿತು ಐಟಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ.
ಚೇತನ್ ಗೌಡ ಮತ್ತು ಪಿ.ರಮೇಶ್ ಅವರಿಗೆ ನೋಟಿಸ್ ನೀಡಿದ್ದ ಐಟಿ ಇಲಾಖೆ ಇತ್ತೀಚೆಗೆ ಅವರನ್ನು ಕಚೇರಿಗೆ ಕರೆಸಿಕೊಂಡ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ, ಆಡಿಯೊದ ಸತ್ಯಾಸತ್ಯತೆ ಪರಿಶೀಲನೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಪ್ರತಿ ಬೂತ್ಗೆ ತಲಾ 5 ಲಕ್ಷ ರೂ. ನಿಗದಿಪಡಿಸಲಾಗಿದೆ. ಇದು ಸುಮಾರು 150 ಕೋಟಿ ರೂ. ಆಗುತ್ತದೆ ಎಂದು ಇಬ್ಬರು ಮಾತನಾಡಿರುವ ಆಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಂಡ್ಯ ಚುನಾವಣೆಗಾಗಿ 150 ಕೋಟಿ ಡೀಲ್ ಮಾಡಲಾಗಿದೆ ಎಂಬ ಮಾತುಕತೆ ಆಡಿಯೋ ಕಳೆದ ಕೆಲ ದಿನಗಳ ಹಿಂದೆ ಆಡಿಯೋ ವೈರಲ್ ಆಗಿತ್ತು. ಆದರೆ ಅಂದು ಆಢಿಯೋ ನಮ್ಮದಲ್ಲ ಎಂದಿದ್ದ ಚೇತನ್ ಗೌಡ ಇಂದು ನಮ್ಮದೇ ಎಂದು ಹೇಳಿದ್ದಾರೆ.
ಆಡಿಯೋ ಸಂಭಾಷಣೆಯಲ್ಲಿ ಜೆಡಿಎಸ್ 150 ಕೋಟಿ ಖರ್ಚು ಮಾಡುತ್ತಿದೆ ಎಂದು ಹೇಳಲಾಗಿತ್ತು, ಅದರ ಆಧಾರದ ಮೇಲೆ ನಾವು ತನಿಖೆ ನಡೆಸುತ್ತಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರರು ಈಗ ಹಣ ಖರ್ಚು ಮಾಡಿ ನಂತರ ಅದನ್ನು ವಾಪಸ್ ಪಡೆದುಕೊಳ್ಳುತ್ತಾರೆ ಎಂದು ಆಡಿಯೋದಲ್ಲಿ ಚೇತನ್ ಗೌಡ ಹೇಳಿದ್ದರು. ಹೀಗಾಗಿ ಗುತ್ತಿಗೆದಾರರ ಪಟ್ಟಿ ಪಡೆದುಕೊಂಡಿರುವ ಐಟಿ ಇಲಾಖೆ ಅಧಿಕಾರಿಗಳು ಎಷ್ಟೆಷ್ಟು ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ವಿವರ ಪಡೆಯುತ್ತಿದ್ದಾರೆ.
ಈ ಸಂಬಂಧ ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಈಗ ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ಮೇ 19ರ ನಂತರ ಆಯೋಗ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.