ರೋಷನ್ ಬೇಗ್
ಕರ್ನಾಟಕ
ಸಿಎಂ ಮೇಲೆ ಅನುಕಂಪ, ಕೈ ನಾಯಕರ ವಿರುದ್ಧ ಬೇಗ್ ಕೋಪ ತಾಪ, ಸ್ವಪಕ್ಷೀಯರ ವಿರುದ್ದವೇ ಏಕೆ ಆರೋಪ?
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ರೋಷನ್ ಬೇಗ್ ಕೈ ....
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ರೋಷನ್ ಬೇಗ್ ಕೈ ಮುಖಂಡರ ವಿರುದ್ಧ ಬಂಡಾಯ ಸಾರಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಬೇಗ್ ಆತುರದ ಹೇಳಿಕ ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಜಡು ಮಾಡಿದೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲವೆಂಬ ಕೋಪಕ್ಕೆ ಬೇಗ್ ರೋಷಾವೇಷ ತೋರಿದ್ದಾರೆ, ಜೊತೆಗೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಟಿಕೆಟ್ ನೀಡದ್ದೇ ರೋಷನ್ ಬೇಗ್ ಅವರ ಆಕ್ರೋಶಕ್ಕೆ ಕಾರಣವಾಗಿದೆ, ಜೊತೆಗೆ ಕಾಂಗ್ರೆಸ್ ನಲ್ಲಿ ಜಮೀರ್ ಅಹ್ಮದ್ ತಮಗಿಂತ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ ಎಂಬ ಹತಾಶೆ ಕೂಡ ಬೇಗೇ ಹೇಳಿಕೆಯಲ್ಲಿ ಕಾಣುತ್ತಿದೆ.
ಚುನಾವಣೆ ಫಲಿತಾಂಶ ಪ್ರಕಟವಾದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ರೋಷನ್ ಬೇಗ್ ಉತ್ತಮ ರೀತಿಯಲ್ಲಿ ಸಹಕಾರ ನೀಡಲಿಲ್ಲ ಎಂಬ ಆರೋಪ ಬೈಗುಳ ತಮ್ಮ ವಿರುದ್ಧ ಬರದಂತೆ ನೋಡಿಕೊಳ್ಳಲು ರೋಷನ್ ಬೇಗ್ ಈ ಅಸ್ತ್ರ ಬಳಸಲಾಗಿದೆ, ರಿಜ್ವಾನ್ ಹರ್ಷದ್ ಪರ ಬೇಗ್ ಕೆಲಸ ಮಾಡಿಲ್ಲ, ಫಲಿತಾಂಶ ಪ್ರಕಟವಾದ ನಂತರ ಈ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಾರೆ, ಅದಕ್ಕೆ ತಮ್ಮ ಬಳಿ ಉತ್ತರವಿಲ್ಲ, ಅದಕ್ಕಾಗಿ ಚುನಾವಣೋತ್ತರ ಸಮೀಕ್ಷೆಯನ್ನು ದಾಳವಾಗಿ ಬೇಗ್ ಬಳಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ದುರಂಹಕಾರವನ್ನು ಅಳತೆ ಮಾಡಲು ಸಾಧ್ಯವಿಲ್ಲ, ವಿರೋಧ ಪಕ್ಷದವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆರೋಪಿಸುವ ಈ ನಾಯಕರು ಸಚಿವ ಸಂಪುಟ ಸ್ಥಾನಗಳನ್ನು ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂದು ಬೇಗ್ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಅವರನ್ನು ನಾನು ಹೇಗೆ ಬೈಯ್ಯಲಿ, ಕೆಲಸ ಮಾಡಲು ಅವರಿಗೆ ಅವಕಾಶ ಮಾಡಿಕೊಡುತ್ತಿಲ್ಲ, ಮೊದಲ ದಿನದಿಂದಲೂ ತಾವು ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದರು ಎಂದು ಬೇಗ್ ಟ್ವೀಟ್ ಮಾಡಿದ್ದರು.
ಇನ್ನೂ ಕಾಂಗ್ರೆಸ್ ತೊರೆಯುವ ಸೂಚನೆಯನ್ನು ರೋಷನ್ ಬೇಗ್ ನೀಡಿದ್ದಾರೆ. ರೋಷನ್ ಬೇಗ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಕೆರಳಿದ್ದಾರೆ, ತಮ್ಮ ಹೇಳಿಕೆಗೆ ಉತ್ತರ ನೀಡುವಂತೆ ಬೇಗ್ ಅವರಿಗೆ ನೋಟಿಸ್ ನೀಡಲಾಗಿದೆ, ಕುಮಾರಸ್ವಾಮಿ ಮೇಲೆ ಸಹಾನುಭೂತಿ ತೋರುತ್ತಿರುವ ರೋಷನ್ ಬೇಗ್ ಬಿಜೆಪಿ ದೋಣಿ ಏರಲು ಸಿದ್ಧವಾಗಿದ್ದಾರೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ರೋಷನ್ ಬೇಗ್ ಅವರಿಗೆ ತಾಕತ್ತು ಇದ್ದರೇ ಬಿಜೆಪಿ ಟಿಕೆಟ್ ಪಡೆದು ಶಿವಾಜಿ ನಗರ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಬರಲಿ ಎಂದು ರಿಜ್ವಾನ್ ಅರ್ಷದ್ ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ