ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆನ್ ಲೈನ್ ಮೊರೆಹೋಗುವ ರೋಗಿಗಳು; ವೈದ್ಯರಿಗೆ ಬೇರೆಯದೇ ತಲೆನೋವು!

ಆನ್ ಲೈನ್ ಕ್ರಾಂತಿ ಮತ್ತು ಮೊಬೈಲ್ ಇಂಟರ್ ನೆಟ್ ಸೇವೆ ಆರಂಭವಾದ ಬಳಿಕ ಈಗ ಪ್ರತಿಯೊಂದೂ ಆನ್ ಲೈನ್ ಮಯವಾಗಿದೆ. ಹಸಿವಿಗಾಗಿ ಸೇವಿಸುವ...
Published on

ಆನ್ ಲೈನ್ ಕ್ರಾಂತಿ ಮತ್ತು ಮೊಬೈಲ್ ಇಂಟರ್ ನೆಟ್ ಸೇವೆ ಆರಂಭವಾದ ಬಳಿಕ ಈಗ ಪ್ರತಿಯೊಂದೂ ಆನ್ ಲೈನ್ ಮಯವಾಗಿದೆ. ಹಸಿವಿಗಾಗಿ ಸೇವಿಸುವ ತಿಂಡಿಯಿಂದ  ಹಿಡಿದು ಮಗುವಿಗೆ ತಾಯಿ ಕುಡಿಸುವ ಹಾಲಿನವರೆಗೂ ಪ್ರತಿಯೊಂದಕ್ಕೂ ಆನ್ ಲೈನ್ ಮೊರೆ ಹೋಗುತ್ತಿದ್ದೇವೆ. ಇನ್ನು ಅನಾರೋಗ್ಯದ ವಿಚಾರಕ್ಕೆ ಬರುವುದಾದರೆ ಉತ್ತಮ ಗುಣಮಟ್ಟದ ಆಸ್ಪತ್ರೆ,  ವೈದ್ಯರು, ಖರ್ಚು ವೆಚ್ಚಗಳು ಇತ್ಯಾದಿ..ಇತ್ಯಾದಿ ಸೇರಿದಂತೆ ಆಸ್ಪತ್ರೆಗೆ ದಾಖಲಾಗುವ ಮೊದಲು ಆನ್ ಲೈನ್ ಶೋಧ ನಡೆಸಿದ ಬಳಿಕವೇ ಆಸ್ಪತ್ರೆಗೆ ದಾಖಲಾಗುತ್ತಿರುವ ಉದಾಹರಣೆಗಳು  ಕಣ್ಣಮುಂದೆಯೇ ಇದೆ.

ಹೀಗೆ ಪ್ರತಿಯೊಂದಕ್ಕೂ ಆನ್ ಲೈನ್ ಮೊರೆಹೋಗುವ ಈ ಪ್ರವೃತ್ತಿ ರೋಗಕ್ಕೆ ಔಷಧ ನೀಡುವ ವೈದ್ಯರಿಗೇ ತಲೆನೋವು ಬರುವಂತಾಗಿದೆ. ಉತ್ತಮ ಆರೋಗ್ಯಕ್ಕಾಗಿ ವಿವಿಧ ಆಸ್ಪತ್ರೆಗಳನ್ನು  ಮತ್ತು ವೈದ್ಯರನ್ನು ಆನ್ ಲೈನ್ ಮೂಲಕವಾಗಿ ಸಂಪರ್ಕಿಸುವ ರೋಗಿಗಳು, ವೈದ್ಯರೊಂದಿಗೆ ನಡೆಸುವ ಆನ್ ಲೈನ್ ಚರ್ಚೆಗಳು ಸಾಕಷ್ಟು ಬಾರಿ ವೈದ್ಯರ ಅಸಮಾಧಾನಕ್ಕೆ  ಕಾರಣವಾಗುತ್ತವೆಯಂತೆ.

ಈ ಬಗ್ಗೆ ಫಿಲಡೆಲ್ಫಿಯಾ ಆಸ್ಪತ್ರೆಯ ಖ್ಯಾತ ಮಕ್ಕಳ ವೈದ್ಯ ಕ್ರಿಸ್ ಫಾಡ್ನರ್ ಅವರು ಪ್ರತಿಕ್ರಿಯೆ ನೀಡಿದ್ದು, ಆನ್ ಲೈನ್ ನಲ್ಲಿ ವೈದ್ಯರೊಂದಿಗೆ ರೋಗಿಗಳು ವ್ಯವಹರಿಸುವ ರೀತಿಯಾಧಾರದ ಮೇಲೆ  ನಾವು ಅವರ ರೋಗದ ಕುರಿತು ಮಾಹಿತಿ ಕಲೆಹಾಕುತ್ತೇವೆ. ಆದರೆ ಕೆಲವೊಮ್ಮೆ ರೋಗಿಗಳು ಕಳುಹಿಸುವ ಸಂದೇಶಗಳು ಹೇಗಿರುತ್ತವೆ ಎಂದರೆ ರೋಗ ಗುಣಮುಖ ಮಾಡಬೇಕಾದ ನಾವುಗಳೇ  ರೋಗಿಗಳಾಗಿ ಬಿಡುತ್ತೇವೆ. ರೋಗಿಗಳು ನೀಡುವ ರೋಗದ ಕುರಿತ ಮಾಹಿತಿಗಳು ಕೆಲ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನೂ ಮೀರಿಸುತ್ತವೆ ಎಂದು ಹೇಳಿದ್ದಾರೆ.

ರೋಗದ ಕುರಿತು ಆಳವಾಗಿ ತಿಳಿದುಕೊಳ್ಳಬೇಕೆಂಬ ಬಯಕೆಯಿಂದಲೋ ಅಥವಾ ರೋಗದಿಂದ ಮುಕ್ತನಾಗಿ ಬೇಗ ಗುಣಮುಖನಾಗಬೇಕು ಎಂಬ ಉದ್ದೇಶದಿಂದಲೋ ಕಳುಹಿಸುವ  ಸಂದೇಶಗಳು ವೈದ್ಯರ ತಲೆನೋವಿಗೆ ಕಾರಣವಾಗಿದೆಯಂತೆ. ಇದನ್ನು ಓದಲೂ ಆಗದೇ ನಿರ್ಲಕ್ಷಿಸಲೂ ಆಗದೆ ವೈದ್ಯರು ತಬ್ಬಿಬ್ಬಾದ ಸಂದರ್ಭಗಳು ಕೂಡ ಇವೆ ಎಂದು ಕ್ರಿಸ್ ಫಾಡ್ನರ್  ಹೇಳಿಕೊಂಡಿದ್ದಾರೆ. ಅಂತೆಯೇ ಕೆಲ ರೋಗಿಗಳಂತೂ ಇಂಟರ್ ನೆಟ್ ನಲ್ಲಿ ದೊರೆತ ಮಾಹಿತಿಗಳನ್ನೇ ನಿಜವೆಂದು ನಂಬಿ ಅದರ ಆಧಾರದ ಮೇಲೆ ಚಿಕಿತ್ಸೆ ನೀಡುವಂತೆ ವೈದ್ಯರ ಮೇಲೆ  ಪರೋಕ್ಷ ಒತ್ತಡ ಹೇರುತ್ತಾರೆ. ಆದರೆ ಅಂತರ್ಜಾಲದಲ್ಲಿ ದೊರೆತ ಎಲ್ಲ ಅಂಶಗಳು ಸತ್ಯವೆಂದು ಹೇಳಲು ಸಾಧ್ಯವಿಲ್ಲ. ರೋಗಿಯ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಅದಕ್ಕೆ ತಕ್ಕಂತೆ ಚಿಕಿತ್ಸೆ  ನೀಡಬೇಕಾಗುತ್ತದೆ ಎಂದು ಫಾಡ್ನರ್ ಹೇಳಿದ್ದಾರೆ.

ಇನ್ನು ಕೆಲ ರೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯಲ್ಲಿನ ತಮ್ಮ ಅನುಭವನ್ನು ಹಂಚಿಕೊಳ್ಳುವ ಭರದಲ್ಲಿ ಇಡೀ ವೈದ್ಯಕೀಯ ಶಿಕ್ಷಣೆವೇ ತಮಗೆ ತಿಳಿದಂತೆ ಬರೆದುಕೊಳ್ಳುತ್ತಾರೆ.  ಇಂತಹುದೇ ಒಂದು ಪ್ರಕರಣ ಈ ಹಿಂದೆ ಬೆಳಕಿಗೆ ಬಂದಿತ್ತು. ತನ್ನ 10 ವರ್ಷದ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಓರ್ವ ತಂದೆ ಬಳಿಕೆ ಸಾಮಾಜಿಕ ಜಾಲಾತಾಣ ಫೇಸ್ ಬುಕ್ ನಲ್ಲಿ ಪೇಜ್ ತೆರೆದು,  ಅದರಲ್ಲಿ ತನ್ನ ಅನುಭವಗಳನ್ನು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಬರೆಯುತ್ತಿದ್ದ. ಈ ಪುಟಕ್ಕೆ ಅಂದು ಸುಮಾರು ವೈದ್ಯರು, ನರ್ಸ್ ಗಳು ಸೇರಿದಂತೆ 60 ಸಾವಿರ ಮಂದಿ ಫಾಲೋವರ್  ಗಳಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಮಗನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡ ಬಳಿಕ ಆ ಪೋಷಕರು ಆಸ್ಪತ್ರೆ ವಿರುದ್ಧ ಲೇಖವಗಳನ್ನು ಬರೆದರು. ಬಾಹ್ಯಾ ಮತ್ತು ಪ್ರಾಯೋಗಿಕ  ವೈದ್ಯಕೀಯ ಚಿಕಿತ್ಸೆಗೆ ಆಗ್ರಹಿಸಿ ಲೇಖನಗಳನ್ನು ಪ್ರಕಟಿಸಿದರು. ಕೇವಲ 48 ಗಂಟೆಗಳಲ್ಲಿ ಈ ಲೇಖನಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು. ಸುದ್ದಿಮಾಧ್ಯಮಗಳಲ್ಲಿ ಆಸ್ಪತ್ರೆ ಹಾಗೂ ಅದರ  ಸಿಬ್ಬಂದಿಗಳ ವಿರುದ್ಧ ಸುದ್ದಿಗಳು ಬರಲಾರಂಭಿಸಿದವು. ಇಂತಹ ಘಟನೆಗಳು ವೈದ್ಯರ ಮೇಲೆ ವ್ಯಾಪಕ ಒತ್ತಡ ಹೇರುತ್ತವೆ. ಸದಾಕಾಲ ಒತ್ತಡದಲ್ಲೇ ಕೆಲಸ ಮಾಡುವಂತೆ ಮಾಡುತ್ತವೆ.  ವೈದ್ಯಕೀಯ ಸಂಸ್ಥೆಗಳು ಯಾವುದೇ ಪರಿಸ್ಥಿತಿ ಎದುರಿಸಲು ಸ್ಪಷ್ಟ ನೀತಿ-ನಿಲುವುಗಳನ್ನು ಹೊಂದಿರಬೇಕು ಎಂದು ಫಾಡ್ನರ್ ಹೇಳಿದ್ದಾರೆ.

ಅಂತೆಯೇ ವೈದ್ಯರು ಮತ್ತು ರೋಗಿಗಳ ನಡುವಿನ ಶಂಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವೈದ್ಯರು ರೋಗಿಗಳಲ್ಲಿ ಅವರಿಗೆ ತಿಳಿದ ಸಂಪೂರ್ಣ ಮಾಹಿತಿ ಅಂದರೆ ಅವರು ತಿಳಿದ ವಿಚಾರ ಅಥವಾ  ಅಂತರ್ಜಾಲದಲ್ಲಿ ಜಾಲಾಡಿ ಸಂಗ್ರಹಿಸಿದ ಮಾಹಿತಿಗಳನ್ನು ಕಲೆಹಾಕಿ ಅದನ್ನು ಅವಲೋಕಿಸಿ ಅದಕ್ಕೆ ತಕ್ಕಂತೆ ನೀಡಬಹುದಾದ ಚಿಕಿತ್ಸಾ ಮಾದರಿ ಕುರಿತು ರೋಗಿಗಳೊಂದಿಗೆ ಚರ್ಚಿಸಿ ಬಳಿಕ  ಚಿಕಿತ್ಸೆ ಮಾಡುವುದರಿಂದ ವೈದ್ಯರು ಮತ್ತು ರೋಗಿಗಳ ನಡುವೆ ಯಾವುದೇ ಶಂಕೆ ಇರುವುದಿಲ್ಲ. ವೈದ್ಯಕೀಯ ಲೋಕದಲ್ಲಿ ನಂಬಿಕೆಯೇ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com