ದಾವಣಗೆರೆ: ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಸೇಡು ತೀರಿಸಿಕೊಂಡಿದ್ದು, ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂಪಿ ರೇಣುಕಾಚಾರ್ಯ ಅವರು ಸೋಲಿನ ಕಹಿ ಅನುಭವಿಸಿದ್ದಾರೆ.
ಅಂಚೆ ಮತ ಎಣಿಕೆ ಸಂದರ್ಭದಲ್ಲಿಯೇ ಹಿನ್ನಡೆ ಅನುಭವಿಸಿದ ರೇಣುಕಾಚಾರ್ಯ ಅವರು ಮತ್ತೆ ಚೇತರಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಇವಿಎಂ ಮತಗಳ ಎಣಿಕೆಯಲ್ಲಿಯೂ ಶಾಂತನಗೌಡ ಅವರು ಗಮನಾರ್ಹ ಮುನ್ನಡೆ ಕಾಯ್ದುಕೊಂಡಿದ್ದರು. ಸುಮಾರು 14 ಸಾವಿರ ಮತಗಳ ಅಂತರದಿಂದ ಶಾಂತನಗೌಡ ಮುನ್ನಡೆ ಪಡೆದಿದ್ದರು. ಇದೀಗ ಅಧಿಕೃತ ಫಲಿತಾಂಶ ಲಭ್ಯವಾಗಿದ್ದು, ರೇಣುಕಾಚಾರ್ಯ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಗೆಲುವಿನ ನಗೆ ಬೀರಿದ್ದಾರೆ.
ಇದನ್ನೂ ಓದಿ: ಶಿರಸಿಯಲ್ಲಿ ವಿಶ್ವೇಶ್ವರ ಕಾಗೇರಿಗೆ ಸೋಲು!
ಆ ಮೂಲಕ 2018ರ ಚುನಾವಣೆಯಲ್ಲಿ ರೇಣುಕಾಚಾರ್ಯ ಎದುರು ಸೋಲು ಕಂಡಿದ್ದ ಕಾಂಗ್ರೆಸ್ನ ಡಿಜಿ ಶಾಂತನಗೌಡ ಅವರು ಈ ಬಾರಿ ಸೇಡು ತೀರಿಸಿಕೊಂಡಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪರ್ಧಿಸಿದ್ದರೆ, ಕಾಂಗ್ರೆಸ್ನಿಂದ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಎದುರಾಳಿಯಾಗಿ ಕಣಕ್ಕಿಳಿದಿದ್ದರು. ಕುಂಕೋವ ಕೃಷ್ಣಪ್ಪ ಅವರು ಬಿಎಸ್ಪಿಯಿಂದ ಅಖಾಡಕ್ಕಿಳಿದಿದ್ದಾರೆ. ಎಎಪಿಯಿಂದ ನರಸಿಂಹಪ್ಪ ಕೆ ಸ್ಪರ್ಧೆ ಮಾಡಿದ್ದರು.
ಇದನ್ನೂ ಓದಿ: ಬಳ್ಳಾರಿ ಗ್ರಾಮೀಣ ಫಲಿತಾಂಶ; ಬಿ. ಶ್ರೀರಾಮುಲು ಸೋಲು
2018ರ ಚುನಾವಣೆಯಲ್ಲಿ ರೇಣುಕಾಚಾರ್ಯ ಅವರು 80,624 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಆಗ ಶಾಂತನಗೌಡ ಅವರಿಗೆ 76,391 ಮತಗಳು ದೊರಕಿದ್ದವು. 4233 ಮತಗಳ ಅಂತರದಿಂದ ಶಾಂತನಗೌಡ ಸೋಲು ಅನುಭವಿಸಿದ್ದರು. 2013ರ ಚುನಾವಣೆಯಲ್ಲಿ ಶಾಂತನಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆಗ ಹೊನ್ನಾಳಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಎಂಪಿ ರೇಣುಕಾಚಾರ್ಯ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಹೊರಗೆ ಬಂದಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ್ದರು. ಅವರ ಜತೆ ಕೆಜೆಪಿ ಸೇರ್ಪಡೆಯಾಗಿದ್ದ ರೇಣುಕಾಚಾರ್ಯ, ಈ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.
Advertisement