ಕೋಲ್ಕತಾ ಮೇಲ್ಸೇತುವೆ ದುರಂತ: ಐವಿಆರ್ ಸಿಎಲ್ ನಿಂದ ಕರ್ನಾಟಕದಲ್ಲೂ 12 ಯೋಜನೆ
ಬೆಂಗಳೂರು: ಕೋಲ್ಕತಾದಲ್ಲಿ ಕುಸಿದುಬಿದ್ದ ಮೇಲ್ಸೇತುವೆಯನ್ನು ನಿರ್ಮಿಸುತ್ತಿದ್ದ ಐವಿ ಆರ್ ಸಿಎಲ್ ಕಂಪನಿ ರಾಜ್ಯದಲ್ಲೂ 12 ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಈ ಪೈಕಿ ಮೆಟ್ರೋ ರೈಲ್ವೆಯ 6 ನಿಲ್ದಾಣಗಳ ಕಾಮಗಾರಿಗಳೂ ಸೇರಿವೆ.
ಐವಿಆರ್ ಸಿಎಲ್ ಸಂಸ್ಥೆ ನಿರ್ಮಿಸುತ್ತಿದ್ದ ಮೇಲ್ಸೇತುವೆ ಕುಸಿದುಬಿದ್ದಿರುವುದು ಸುರಕ್ಷಿತ ಮತ್ತು ಸಮರ್ಥ ಕಾಮಗಾರಿಯ ಬಗೆಗೆ ಕಂಪನಿ ಹೊಂದಿರುವ ಬದ್ಧತೆ ಕುರಿತು ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ ಕರ್ನಾಟಕದಲ್ಲಿ ಈ ವರೆಗೂ ಯಾವುದೇ ಅವಗಢಗಳೂ ಸಂಭವಿಸದಂತೆ ಯಶಸ್ವಿಯಾಗಿ ಕಾಮಗಾರಿ ಮುಕ್ತಾಯಗೊಳಿಸಿರುವ ಉದಾಹರಣೆಗಳಿವೆ.
ಐವಿಆರ್ ಸಿಎಲ್ ಕಂಪನಿ ನಿರ್ಮಿಸಿರುವ ಹಲಸೂರು, ಸಿಎಂ ಹೆಚ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಬೈಯ್ಯಪ್ಪನಹಳ್ಳಿ, ಆರ್ ವಿ ರಸ್ತೆ, ಜಯನಗರ ಮೆಟ್ರೋ ನಿಲ್ದಾಣಗಳ ಪೈಕಿ ಈಗಾಗಲೇ 4 ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿದ್ದು ಜಯನಗರ ಮೆಟ್ರೋ ನಿಲ್ದಾಣ ಹಾಗೂ ಆರ್ ವಿ ರಸ್ತೆ ನಿಲ್ದಾಣ ಇನ್ನಷ್ಟೇ ಉದ್ಘಾಟನೆಯಾಗಬೇಕಿದೆ.
ಐವಿಆರ್ ಸಿ ಎಲ್ ನ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಳೆದ 30 ವರ್ಷಗಳ ಕಂಪನಿ ನಡೆಸಿರುವ ಕಾಮಗಾರಿಗಳಲ್ಲಿ ಕೋಲ್ಕತಾ ಮಾದರಿಯ ದುರಂತಗಳು ಸಂಭವಿಸಿಲ್ಲ. ಕೋಲ್ಕತಾ ಘಟನೆ ದುರದೃಷ್ಟಕರ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಗಳನ್ನು ಹೊರತುಪಡಿಸಿ ಐವಿಆರ್ ಸಿಎಲ್ ಸಂಸ್ಥೆ ಕರ್ನಾಟಕದಲ್ಲಿ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ