ತುಮಕೂರು: ಪೋಷಕರು ಅಪ್ರಾಪ್ತಾ ಬಾಲಕಿಗೆ ಮದುವೆ ಮಾಡುತ್ತಿದ್ದಾರೆ ಎಂಬ ಶಂಕೆ ಮೇರೆಗೆ ಮದುವೆ ನಿಲ್ಲಿಸಿದ ಸಂಘಟನೆಯ ಕಾರ್ಯಕರ್ತರು ನಂತರ ಮುರ್ಖರಾದ ಘಟನೆ ನಡೆದಿದೆ.
ಮದುವೆ ಮಂಟಪಕ್ಕೆ ನುಗ್ಗಿ ಮದುವೆ ನಿಲ್ಲಿಸಿದ ಕಾರ್ಯಕರ್ತರು ವಧುವನ್ನು ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಹುಡುಗಿ ಮದುವೆ ವಯಸ್ಸಿಗೆ ಬಂದಿದ್ದಾಳೆಂದು ತಿಳಿದು ಪೇಚಿಗೆ ಸಿಲುಕಿದರು. ಮದುವೆ ನಿಲ್ಲಿಸಿ ತಮ್ಮ ತಪ್ಪು ತಿಳಿದ ಕಾರ್ಯಕರ್ತರು ಈ ಸಂಬಂಧ ದೂರು ನೀಡದಂತೆ ವಧುವಿನ ಪೋಷಕರಿಗೆ ಬೇಡಿಕೊಂಡರಲ್ಲದೆ ಮತ್ತೆ ಮದುವೆ ಮಂಟಪಕ್ಕೆ ಬಂದು ವರನ ಮನವೊಲಿಸಿ ಮದುವೆ ಮಾಡಿಸಿದ್ದಾರೆ.
ಕುಣಿಗಲ್ ತಾಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯದ ಬಳಿ ಬಾಲಕಿಯೊಬ್ಬಳಿಗೆ ವಿವಾಹ ಮಾಡಲಾಗುತ್ತಿದೆ ಎಂದು ನೆಲಮಂಗಲದ ಕರ್ನಾಟಕ ಜನಸೈನ್ಯ ಸಂಘಟನೆ ಪದಾಧಿಕಾರಿಗಳು ಶನಿವಾರ ಮಹಿಳಾ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿ ವಧುವಿನ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಭಾನುವಾರ ಬೆಳಗ್ಗೆ ಪೊಲೀಸರ ಜತೆ ಸಂಘಟನೆ ಪದಾಧಿಕಾರಿಗಳು ಕಲ್ಯಾಣ ಮಂಟಪಕ್ಕೆ ಹೋಗಿ ಮದುಮಗಳೊಬ್ಬಳನ್ನೇ ಅಮೃತೂರು ಠಾಣೆಗೆ ಕರೆತಂದಿದ್ದಾರೆ.
ನೆಲಮಂಗಲ ತಾಲೂಕಿನ ಎಂಟಗಾನಹಳ್ಳಿಯ ಲಕ್ಷ್ಮೀಗೆ 22 ವರ್ಷವಾಗಿದ್ದು, ತಂದೆ ಮುನಿವೆಂಕಟಪ್ಪ ಮತ್ತು ತಾಯಿ ಗಂಗಮ್ಮ ಮೃತರಾಗಿದ್ದಾರೆ. ಚಿಕ್ಕಪ್ಪ ವೆಂಕಟೇಶ್ ಮತ್ತು ಸಂಬಂಧಿಕರು ಬೆಂಗಳೂರಿನ ಮುತ್ತುರಾಜು ಎಂಬಾತನ ಜತೆ ಮದುವೆ ಮಾಡುತ್ತಿದ್ದರು. ಆದರೆ, ಸತ್ಯ ಸಂಗತಿ ತಿಳಿಯದೆ ಸಂಘಟನೆ ಪದಾಧಿಕಾರಿಗಳು ಅವಾಂತರ ಸೃಷ್ಟಿಸಿದರು.
Advertisement