ಶಿವಮೊಗ್ಗ: ಬೇಸಿಗೆ ಬಂತು ಅಂದ್ರೆ ಸಾಕು ತುಂಗಾ ನದಿ ದಡದಲ್ಲಿರುವ ನಿವಾಸಿಗಳು ಗೋಳು ಹೇಳತೀರದು. ತುಂಗಾ ನದಿ ಸೊಳ್ಳೆಗಳ ಸಾಕಾಣಿಕಾ ಕೇಂದ್ರವಾಗಿ ಬಿಡುತ್ತದೆ. ಇಲ್ಲಿ ವಾಸಿಸುವ ಜನಗಳ ಬದುಕು ಶೋಚನೀಯವಾಗಿ ಬಿಡುತ್ತದೆ.
ತುಂಗಾ ನದಿ ನೀರಿಗೂ ಮತ್ತು ಚರಂಡಿ ನೀರಿಗೂ ವ್ಯತ್ಯಾಸ ಇಲ್ಲದಂತಾಗಿದೆ. ಮುಖ್ಯ ಚರಂಡಿಯಿಂದ ನದಿಗೆ ಸೇರುವ ತ್ಯಾಜ್ಯದಿಂದ ಇಡೀ ತುಂಗಾ ನದಿ ನೀರು ಕಲುಷಿತಗೊಂಡಿದೆ.
100 ಮಿಲಿ ನೀರಿನಲ್ಲಿ ಮಾಲಿನ್ಯತೆ 50 ಎಂ ಎಎನ್ ಪಿ ಮೀರಿರಬಾರದು, ಆದರೆ ಕಳೆದ ಮಾರ್ಚ್ ನಲ್ಲಿ ನಡೆದ ಪರೀಕ್ಷೆಯಲ್ಲಿ 100 ಮಿಲಿ ನೀರಿನಲ್ಲಿ 2.800 ಎಂಪಿಎನ್ ಮಾಲಿನ್ಯತೆ ಇರುವುದು ತಿಳಿದು ಬಂದಿದೆ ಎಂದು ಶಿವಮೊಗ್ಗದ ಕೋಟೆ ರಸ್ತೆಯ ನಿವಾಸಿ ಮಂಜುನಾಥ್ ಎಂಬುವರು ತಿಳಿಸಿದ್ದಾರೆ.
ಇಡಿ ನಗರದ ವಿವಿಧ ಭಾಗಗಳಿಂದ ಬರುವ ಎಲ್ಲಾ ಕೊಳಚೆ, ತ್ಯಾಜ್ಯಗಳು ತುಂಗಾ ನದಿ ಸೇರುತ್ತಿವೆ. ನಗರದ 15 ಚರಂಡಿಗಳ ನೀರು ತುಂಗಾ ನದಿ ಸೇರುತ್ತಿದೆ. ಇದರ ಜೊತೆಗೆ ಮದುವೆ ಛತ್ರಗಳು ತಮ್ಮ ಎಲ್ಲಾ ತ್ಯಾಜ್ಯವನ್ನು ಈ ನದಿಗೆ ತಂದು ಬಿಸಾಡುತ್ತಾರೆ. ಜೊತೆಗೆ ಹಲವು ಜನ ಘನ ತ್ಯಾಜ್ಯವನ್ನು ತಂದು ನದಿಗೆ ಸುರಿಯುತ್ತಿದ್ದಾರೆ.
ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ತಿಂಗಳ ಹಿಂದೆ ಶಿವಮೊಗ್ಗ ನಗರ ಸಭೆಗೆ ಶೋಕಾಸ್ ನೊಟೀಸ್ ನೀಡಿದೆ. ಆದರೆ ಇದುವರೆಗೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆ ಆಯುಕ್ತರು ಇದುವರೆಗೂ ಪೌರಾಡಳಿತ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಯಾಕೆ ದಾಖಲಿಸಲಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಶ್ನಿಸಿದೆ.
ಇನ್ನು 2007 ರಲ್ಲಿ ತುಂಗಾ ನದಿ ಮಾಲಿನ್ಯ ಸಂಬಂಧ ನಗರ ಪಾಲಿಕೆ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಸಿಲಾಗಿತ್ತು. ಈ ಸಂಬಂಧ ಜೆಎಂಎಫ್ ಸಿ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ನಗರಸಭೆ ನೀರು ಶುದ್ದೀಕರಣ ಘಟಕ ಸ್ಥಾಪಿಸಲು ಸಮಯ ನೀಡುವಂತೆ ಕೋರಿತ್ತು.
ನಂತರ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ 65 ಕೋಟಿ ರು. ವೆಚ್ಚದಲ್ಲಿ ತ್ಯಾವರೆಚಟ್ಟನಹಳ್ಳಿ ಬಳಿ ನೀರು ಶುದ್ಧೀಕರಣ ಘಟಕ ಆರಂಭಿಸಲು ಆರಂಭಿಸಿತು. ತುಂಗಾ ನದಿಗೆ 20 ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಲು ಆರಂಭಿಸಿತು. ಆದರೆ ನಗರಸಭೆಯ ನಿರ್ಲಕ್ಷ್ಯದಿಂದ ಗೋಡೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಹೀಗಾಗಿ ನದಿ ನೀರಿಗೆ ತ್ಯಾಜ್ಯ ಬಂದು ಸೇರುವುದನ್ನು ತಡೆಯಲಾಗುತ್ತಿಲ್ಲ.
Advertisement