ಪೊಲೀಸ್ ವರಿಷ್ಠ, ಸಚಿವರೊಂದಿಗಿನ ಮೊಬೈಲ್ ರೆಕಾರ್ಡ್ ಬಿಡುಗಡೆ ಮಾಡಿದ ಅನುಪಮ ಶೆಣೈ
ಮುಂಬೈ: ಜಿಲ್ಲಾ ಉಸ್ತುವಾರಿ ಸಚಿವರೊಂದಿಗಿನ ವಾಗ್ವಾದ ಹಿನ್ನಲೆಯಲ್ಲಿ ಕೂಡ್ಲಿಗಿಯಿಂದ ವರ್ಗಾವಣೆಗೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿ ಅನುಮಪ ಶೆಣೈ ಅವರು ಸತತ 8 ತಿಂಗಳ ಬಳಿಕ ತಮ್ಮ ವರ್ಗಾವಣೆಗೆ ಕಾರಣವಾದ ದೂರವಾಣಿ ಕರೆಗಳ ರೆಕಾರ್ಡ್ ಅನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ನಿನ್ನೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಅನುಪಮಾ ಶೆಣೈ ಅವರು, ತಮ್ಮ ವರ್ಗಾವಣೆಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪಿಟಿ ಪರಮೇಶ್ವರ ನಾಯ್ಕ್ ಅವರೇ ಕಾರಣ ಎಂದು ನೇರವಾಗಿ ಆರೋಪ ಮಾಡಿದರು. ಈ ಕುರಿತಂತೆ ಆಡಿಯೋ ಟೇಪ್ ಬಿಡುಗಡೆ ಮಾಡಿದ ಅವರು, ತಮ್ಮ ಮತ್ತು ಪರಮೇಶ್ವರ್ ನಾಯಕ್ ಅವರ ನಡುವಿನ ಸಂಭಾಷಣೆಯನ್ನು ಪ್ರಸ್ತಾಪಿಸಿದರು. ಅಲ್ಲದೆ ಈ ಘಟನೆ ಬಳಿಕ ತಮ್ಮ ಪ್ರಭಾವ ಬಳಿಸಿದ ಪರಮೇಶ್ವರ ನಾಯ್ಕ್ ಅವರು ತಮ್ಮನ್ನು ವರ್ಗಾವಣೆ ಮಾಡಿಸಿದರು ಎಂದು ಹೇಳಿದ್ದಾರೆ.
ಅಂತೆಯೇ ವರ್ಗಾವಣೆಯಾದ ಬಳಿಕ ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ನಡೆಸಿದ ಸಂಭಾಷಣೆಯ ದಾಖಲೆಯನ್ನೂ ಕೂಡ ಅನುಪಮ ಬಿಡುಗಡೆ ಮಾಡಿದ್ದಾರೆ.
ಲಿಕ್ಕರ್ ಮಾಫಿಯಾ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಅನುಪಮ ಶೆಣೈ ಅವರ ಕರ್ತವ್ಯಕ್ಕೆ ಪರಮೇಶ್ವರ್ ನಾಯ್ಕ್ ಅಡ್ಡಿ ಪಡಿಸಿದರು. ಇದಕ್ಕೆ ಅನುಪಮ ಶೆಣೈ ಇದನ್ನು ಧಿಕ್ಕರಿಸಿ ತಮ್ಮ ಕರ್ತವ್ಯ ಮುಂದುವರೆಸಿದಾಗ ಅವರಿಗೆ ಕರೆ ಮಾಡಿದ್ದ ಪರಮೇಶ್ವರ್ ನಾಯಕ್ ಅವರು ಅನುಪಮಾ ಶೆಣೈ ಅವರನ್ನು ಏಕವಚನದಲ್ಲಿ ಮಾತನಾಡಿಸಿದ್ದಾರೆ. ಇದರಿಂದ ಕೋಪಗೊಂಡ ಅನುಪಮ ಶೈಣೈ ಗೌರವ ನೀಡಿ ಮಾತನಾಡಿಸುವಂತೆ ಹೇಳಿರುವ ಸಂಭಾಷಣೆಗಳು ಪ್ರಸ್ತುತ ಬಿಡಗಡೆಯಾಗಿರುವ ದೂರವಾಣಿ ಸಂಭಾಷಣೆಯಲ್ಲಿ ದಾಖಲಾಗಿದೆ.
ಈ ದೂರವಾಣಿ ಸಂಭಾಷಣೆಯಿಂದ ಕೋಪಗೊಂಡ ಪರಮೇಶ್ವರ ನಾಯ್ಕ್ ಅವರು ಅನುಪಮ ಶೆಣೈರನ್ನು ವರ್ಗಾವಣೆ ಮಾಡಿಸಿದ್ದಾರೆ. ಈ ವಿಚಾರವನ್ನು ಸ್ವತಃ ಪರಮೇಶ್ವರ ನಾಯ್ಕ್ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿಕೊಂಡಿರುವ ವಿಡಿಯೋ ಈಗಾಗಲೇ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು. ಇನ್ನು ವರ್ಗಾವಣೆ ಬಳಿಕ ತಾವು ಮಾನಸಿಕವಾಗಿ ಖುದ್ದುಹೋಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದೆವು. ಈ ಬಗ್ಗೆ ತಮ್ಮ ಬಳಿ ದಾಖಲೆಗಳಿದ್ದು, ಈ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಲು ಹೋದಾಗ ಅಲ್ಲೂ ತಮಗೆ ಅಪಮಾನವಾಯಿತು. ಹೀಗಾಗಿಯೇ ತಾವು ಕೆಲಸ ತೊರೆಯುವ ನಿರ್ಧಾರಕ್ಕೆ ಬಂದಿದ್ದಾಗಿ ಅನುಪಮಾ ಶೆಣೈ ಹೇಳಿಕೊಂಡಿದ್ದಾರೆ.
ಕೇಂದ್ರ ಸಚಿವರಿಗೆ ದೂರು
ಇನ್ನು ಈ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ಸಮರವೇ ಸಾರಿರುವ ತಮಗಾದ ಅನ್ಯಾಯದ ಕುರಿತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವಂತೆ ದೆಹಲಿ ತೆರಳಿರುವ ಅನುಪಮಾ ಶೆಣೈ ಅವರು ಅಲ್ಲಿ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ರನ್ನು ಭೇಟಿ ಮಾಡಿ ತಮ್ಮ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಲ್ಲಿಂದಲೇ ರಾಷ್ಟೀಯ ಮಾಧ್ಯಮವೊಂದರಲ್ಲಿ ತಮ್ಮ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಒಟ್ಟಾರೆ ಕಳೆದೊಂದು ತಿಂಗಳಿಂದ ಮಾಧ್ಯಮಗಳಿಂದ ದೂರವುಳಿದಿದ್ದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಈದೀಗ ಏಕಾಏಕಿ ರಾಜ್ಯ ಸರ್ಕಾರ, ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಶಾಸಕ ಪರಮೇಶ್ವರ ನಾಯ್ಕ್ ಅವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

