ಉಡುಪಿ: ಗೋವುಗಳನ್ನು ರಕ್ಷಿಸುವ ನೆಪದಲ್ಲಿ ಗೋರಕ್ಷಕ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಉಡುಪಿಯಲ್ಲಿ ಬುಧವಾರ ನಡೆದಿದೆ.
ಪ್ರವೀಣ್ ಪೂಜಾರಿ (29) ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತರಾಗಿದ್ದು, ಇವರು ಗೋವುಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು. ಇದರಂತೆ ಬುಧವಾರ ಕೂಡ ಯಾರೋ ಖರೀದಿಸಿದ್ದ ಮೂರು ಹಸುಗಳನ್ನು ತನ್ನ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಹಿಂದೂ ಜಾನಜಾಗೃತಿ ಸಮಿತಿಯ ಕಾರ್ಯಕರ್ತರ ಗುಂಪು ಇದ್ದಕ್ಕಿದ್ದಂತೆ ಪ್ರವೀಣ್ ಅವರ ಮೇಲೆ ದಾಳಿ ಮಾಡಿದೆ.
ಕಬ್ಬಿಣದ ರಾಡ್ ಹಾಗೂ ಹಗ್ಗವನ್ನಿಡಿದು ಪ್ರವೀಣ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ನಂತರ ಶಾಲೆಯೊಂದರ ಬಳಿ ಪ್ರವೀಣ್ ಅವರನ್ನು ಎಸೆದು ಹೋಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಪ್ರವೀಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಪ್ರವೀಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ವೇಳೆ ಪ್ರವೀಣ್ ಅವರ ಗೆಳೆಯರಾದ ಪೂಜಾರಿ ಮತ್ತು ಅಕ್ಷಯ್ ದೇವಾಡಿಗ ಕೂಡ ಗಾಯಗೊಂಡಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಬುಧವಾರ ರಾತ್ರಿ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧನಕ್ಕೊಳಗಾದವರನ್ನು ಶ್ರೀಕಾಂತ್, ಉಮೇಶ್, ಪ್ರದೀಪ್, ಸಂತೋಷ್ ಮತ್ತು ರಮೇಶ್ ಎಂದು ಗುರ್ತಿಸಲಾಗಿದೆ.
ಇದರಂತೆ ನಿನ್ನೆ ಕೂಡ 14 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಪ್ರಸ್ತುತ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆ ನಂತರವಷ್ಟೇ ನಿಯಮದ ಪ್ರಕಾರ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
Advertisement