ಕಾರವಾರ: ಕಾರವಾರ ಸೀಬರ್ಡ್ ನೌಕಾನೆಲೆಯ 2ನೇ ಹಂತದ ಕಾಮಗಾರಿಗೆ 2017ರಲ್ಲಿ ಚಾಲನೆ ದೊರೆಯಲಿದ್ದು, ಸುಮಾರು 19,600 ಕೋಟಿ ರು.ವೆಚ್ಚದ ಕಾಮಗಾರಿ 2021ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಈ ಬಗ್ಗೆ ಶನಿವಾರ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿರುವ ಐಎನ್ ಎಸ್ ಆದಿತ್ಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ನೇವಲ್ ಏರಿಯಾದ ಪ್ಲಾಗ್ ಆಫೀಸರ್ ರಿಯರ್ ಆಡ್ಮಿರಲ್ ಕೆ.ಜೆ.ಕುಮಾರ್ ಅವರು, ಸೀಬರ್ಡ್ ನೌಕಾನೆಲೆಯ 2ನೇ ಹಂತದ ಕಾಮಗಾರಿ 2017ರಲ್ಲಿ ಪ್ರಾರಂಭವಾಗಲಿದ್ದು, ಸುಮಾರು 19,600 ಕೋಟಿ ರು.ವೆಚ್ಚದ ಕಾಮಗಾರಿ 2021ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
"ಭಾರತೀಯ ನೌಕಾದಳದ ಸಾಮರ್ಥ್ಯವನ್ನು ಐಎನ್ಎಸ್ ಕದಂಬ ಹೆಚ್ಚಿಸಿದ್ದು, ಕಾರವಾರ ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ನೌಕಾದಳ ತಾಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದ್ದಾರೆ. 8 ಸಮರ ನೌಕೆಗಳು ನಿಲ್ಲುವ ತಾಣ ಸೀಬರ್ಡ್ ನಲ್ಲಿ ನಿರ್ಮಾಣವಾಗಲಿದ್ದು, ಈ ಪೈಕಿ ಎರಡು ನೆಲೆಗಳನ್ನು ಸಬ್ಮರಿನ್ ನಿಲುಗಡೆಗೆ ಬಳಸಿ, ಉಳಿದ ನಾಲ್ಕು ನೆಲೆಗಳನ್ನು ಯುದ್ಧನೌಕೆಗಳನ್ನು ನಿಲ್ಲಿಸಲು ಬಳಸಲಾಗುವುದು" ಎಂದು ಅವರು ಹೇಳಿದರು.
ಇದಲ್ಲದೆ ಪೂರ್ಣ ಪ್ರಮಾಣದ ಹಡಗು ನಿಲುಗಡೆ ಪ್ರಾಂಗಣವೂ ಇಲ್ಲೇ ನಿರ್ಮಾಣವಾಗಲಿದ್ದು, ಐಎನ್ಎಸ್ ಕದಂಬ ನೌಕಾನೆಲೆ ಭಾರತದ ಪ್ರಮುಖ ಸಬ್ ಮರಿನ್ ನಿಲುಗಡೆ ಮತ್ತು ಕಾರ್ಯಾಚರಣೆಯ ತಾಣವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೇ ಹಟ್ಟಿಕೇರಿ ಬಳಿ ಲಘು ವಿಮಾನಗಳು, ಹೆಲಿಕಾಪ್ಟರ್ಗಳ ನಿಲ್ದಾಣ ಸಹ ನಿರ್ಮಾಣವಾಗಲಿದ್ದು, ನೌಕಾ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನ ನಿಲ್ದಾಣವಾಗಿ ಬಳಕೆ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದರು.
ಸೀಬರ್ಡ್ ನಲ್ಲಿ ತಲೆ ಎತ್ತಲಿದೆ ಮಲ್ಟಿಸ್ಪೆಷಲ್ ಅಸ್ಪತ್ರೆ
ಇನ್ನು ಸೀಬರ್ಡ್ 2ನೇ ಹಂತದ ಕಾಮಗಾರಿ ವೇಳೆ ನೌಕಾನೆಲೆಯಲ್ಲಿ ಅತ್ಯಾಧುನಿಕ ಮಲ್ಟಿಸ್ಪೆಷಲ್ ಸೈನಿಕ ಆಸ್ಪತ್ರೆ ತಲೆ ಎತ್ತಲಿದ್ದು, ಪ್ರಸ್ತುತ ಇರುವ ಐಎನ್ ಹೆಚ್ ಎಸ್ ಪತಂಜಲಿ ಆಸ್ಪತ್ರೆಯನ್ನು ಆಧುನೀಕರಿಸಲಾಗುತ್ತದೆ. ಅಂತೆಯೇ ಪ್ರಸ್ತುತ ಇರುವ 141 ಬೆಡ್ ಗಳ ಬದಲಿಗೆ ಒಟ್ಟು 400 ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ನೌಕಾನೆಲೆಯೊಳಗೇ ಕೇಂದ್ರೀಯ ವಿಶ್ವ ವಿದ್ಯಾಲಯ ಸ್ಥಾಪನೆಗೂ ಚಿಂತನೆ ನಡೆಸಲಾಗಿದೆ.
Advertisement