ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ: ಸಿಎಂಸಿ ಇಂಜಿನಿಯರ್'ನ್ನು ಹಳ್ಳಕ್ಕೆ ತಳ್ಳಿದ ಜನ
ಕೊಪ್ಪಳ: ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯವಹಿಸಿ ಕೆಲಸ ಮಾಡಿದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಜನರು ಸಿಎಂಸಿ ಇಂಜಿನಿಯರ್ ಒಬ್ಬರನ್ನು ಹಳ್ಳಕ್ಕೆ ತಳ್ಳಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಪ್ಪಳದ ಹಲವು ರಸ್ತೆಗಳು ಹಾಳಾಗಿವೆ. ಕೆಲ ತಿಂಗಳ ಹಿಂದೆ ಸಿಎಂಸಿ ಒಳಚರಂಡಿ ಕೆಲಸಕ್ಕೆ ಟೆಂಡರ್ ವೊಂದನ್ನು ನೀಡಿತ್ತು. ಇದೀಗ ಇದರ ಕಾಮಗಾರಿ ಕೆಲಸ ಆರಂಭವಾಗಿದ್ದು, ಕಾಮಗಾರಿ ಕೆಲಸ ಕೂಡ ನಿಧಾನಗತಿಯಲ್ಲಿ ಮಾಡಲಾಗುತ್ತಿದೆ. ಹೀಗಾಗಿ ರಸ್ತೆಗಳಲ್ಲಿ ಚಲಿಸಲು ಸಾರ್ವಜನಿಕರು ಸಂಕಷ್ಟ ಪಡುತ್ತಿದ್ದಾರೆ. ಇದಲ್ಲದೆ, ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು. ರಸ್ತೆಯಲ್ಲಿ ಸಂಚರಿಸಲು ಜನರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ.
ಇದರಂತೆ ನಿನ್ನೆ ಮಾಜಿ ಸೈನಿಕರೊಬ್ಬರು ತಮ್ಮ ಗೆಳೆಯರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ವಾಹನ ಹಳ್ಳಕ್ಕೆ ಸಿಲುಕಿಕೊಂಡಿತ್ತು. ಪರಿಣಾಮ ಬೈಕ್ ಮೇಲಿಂದ ಇಬ್ಬರು ನೆಲಕ್ಕೆ ಬಿದ್ದಿದ್ದರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದರು.
ಸ್ಥಳೀಯರ ಆಗ್ರಹದಂತೆಯೇ ಇಂಜಿನಿಯರ್ ಒಬ್ಬರು ಸ್ಥಳಕ್ಕೆ ಆಗಮಿಸಿದ್ದರು. ಇಂಜಿನಿಯರ್ ನನ್ನು ಕಂಡ ಕೂಡಲೇ ಕೋಪಗೊಂಡ ಸ್ಥಳೀಯರು ಆತನನ್ನು ಹಳ್ಳಕ್ಕೆ ತಳ್ಳಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ನಂತರ ಇಂಜಿನಿಯರ್ ನ್ನು ಮತ್ತೆ ಕೆಲವರು ಮೇಲಕ್ಕೆತ್ತಿದ್ದರು. ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಸಿಎಂಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಇನ್ನಿತರೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.