
ಬೆಂಗಳೂರು: ಒಂಟಿ ಮಹಿಳೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಪ್ರಕರಣವೊಂದು ದಾಖಲಾಗಿದ್ದು, 70 ವರ್ಷದ ವೃದ್ದೆಯೊಬ್ಬರನ್ನು ಕೊಲೆ ಮಾಡಿರುವ ಘಟನೆಯೊಂದು ಚನ್ನಪಟ್ಟಣದಲ್ಲಿ ಬುಧವಾರ ನಡೆದಿದೆ.
ಪುಟ್ಟಲಿಂಗಮ್ಮ ಅಲಿಯಾಸ್ ತಾಯಮ್ಮ ಹತ್ಯೆಯಾದ ವೃದ್ದೆಯಾಗಿದ್ದು, ಚನ್ನಪಟ್ಟಣದಲ್ಲಿ ತಹಸೀಲ್ದಾರ್ ಆಗಿರುವ ರಮೇಶ್ ಅವರ ತಾಯಿಯಾಗಿದ್ದಾರೆ. ಚಿನ್ನದ ಆಭರಣಗಳಿಗಾಗಿಯೇ ವೃದ್ಧೆಯನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯ ವರದಿ ಆಧರಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 2.30ರ ಸುಮಾರಿಗೆ ರಮೇಶ್ ಅವರು ಊಟಕ್ಕೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ರಕ್ತದ ಮಡುವಿನಲ್ಲಿ ಅಡುಗೆ ಮನೆಯಲ್ಲಿ ಬಿದ್ದಿರುವುದನ್ನು ರಮೇಶ್ ಅವರು ನೋಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಮೇಶ್ ಅವರ ಮನೆಯ ಚನ್ನಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿಯೇ ಇದ್ದು, ಪುಟ್ಟಲಿಂಗಮ್ಮ ಅವರು ಮನೆಯಲ್ಲಿ ಒಂಟಿಯಾಗಿದ್ದರು. ಇದನ್ನು ಗಮನಿಸಿದ್ದ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊದಲು ಸ್ಥಳಕ್ಕೆ ಬಂದ ಪೊಲೀಸರು ಕುಕ್ಕರ್ ಸ್ಫೋಟಗೊಂಡಿರುವುದರಿಂದ ಘಟನೆ ಸಂಭವಿಸಿರಬಹುದು ಎಂದು ಭಾವಿಸಿದ್ದರು. ನಂತರ ದುಷ್ಕರ್ಮಿಗಳು ಹಿಂಬಾಗಿಲಿನಿಂದ ಬಂದು ಪುಟ್ಟಲಿಂಗಮ್ಮ ಅವರ ಮೇಲೆ ದಾಳಿ ಮಾಡಿ, ಆಭರಣಗಳನ್ನು ದೋಚಿದ್ದಾರೆಂದು ಹೇಳಿದರು.
ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ದೃಶ್ಯಗಳು ಲಭ್ಯವಾಗಿಲ್ಲ. ಆದರೆ, ದುಷ್ಕರ್ಮಿಗಳು ಹತ್ಯೆಯಾದ ವೃದ್ದೆಗೆ ಹತ್ತಿರದವರೇ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಶೀಘ್ರದಲ್ಲೇ ಕೊಲೆಗಾರರನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
Advertisement