ಶಶಿಧರ್ ಪ್ರಕರಣ: ಸಿಬಿಐ ತನಿಖೆ ವಿರುದ್ಧ ಅರ್ಜಿ ದಾಖಲಿಸಿದ ರಾಜ್ಯ ಸರ್ಕಾರ
ಬೆಂಗಳೂರು: ಪ್ರತಿಭಟನೆ ನಡೆಸಲು ಪೊಲೀಸರಿಗೆ ಪ್ರಚೋದನೆ ನೀಡಿದ ಹಾಗೂ ರಾಜದ್ರೋಹ ಆರೋಪದಡಿ ಬಂಧಿತನಾಗಿರುವ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿರುದ್ಧ ರಾಜ್ಯ ಸರ್ಕಾರ ಮತ್ತೊಂದು ಅರ್ಜಿಯನ್ನು ದಾಖಲಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೊರಿ ಶಶಿಧರ್ ಅವರ ಪತ್ನಿ ಪೂರ್ಣಿಮಾ ಅವರು ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದರಂತೆ ಅರ್ಜಿಯನ್ನು ಪರಿಶೀಲನೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರಿದ್ದ ಪೀಠ , ರಾಜ್ಯ ಸರ್ಕಾರದ ಅನುಮತಿಯಿಲ್ಲದೆಯೇ ಸಿಬಿಐ ತನಿಖೆಗೆ ವಹಿಸುವುದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳಿದೆ. ಅಲ್ಲದೆ, ಜುಲೈ 26 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಈ ಅರ್ಜಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಸಿಬಿಐ ತನಿಖೆಗೆ ವಹಿಸದಂತೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಶಶಿಧರ್ ಅವರು ಪರಮೇಶ್ವರ್ ವಿರುದ್ಧ ಕಾನೂನು ಸಮರಕ್ಕಿಳಿದಿದ್ದರು. ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಲಾಭದಾಯಕ ಹುದ್ದೆಯನ್ನು ಹೊಂದಿದ್ದು, ಅವರನ್ನು ಸಚಿವ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದರಂತೆ ಶಶಿಧರ್ ಅವರನ್ನು ಬಂಧನಕ್ಕೊಳಪಡಿಸಲು ತೀರ್ಮಾನಿಸಿದ್ದ ರಾಜ್ಯ ಪೊಲೀಸ್ ಇಲಾಖೆಯು ಕಳೆದ ತಿಂಗಳು ಶಶಿಧರ್ ಅವರನ್ನು ಅವರ ಮನೆಯಲ್ಲಿಯೇ ಬಂಧನಕ್ಕೊಳಪಡಿಸಿತ್ತು. ಅಲ್ಲದೆ, ಮನೆಯಲ್ಲಿದ್ದ ಮೊಬೈಲ್, ಫೋನ್, ಲ್ಯಾಪ್ ಟಾಪ್, ಪರಮೇಶ್ವರ್ ಅವರ ವಿರುದ್ಧವಿದ್ದ ಪ್ರಕರಣದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಮೂಲಗಳ ಪ್ರಕಾರ ಶಶಿಧರ್ ಅವರು ಬಂಧನಕ್ಕೊಳಗಾಗುವುದಕ್ಕೂ ಹಿಂದಿನ ದಿನ ಶಶಿಧರ್ ಅವರು ಪರಮೇಶ್ವರ್ ಅವರ ವಿರುದ್ಧ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪರಮೇಶ್ವರ್ ಅವರಿಗೆ ನ್ಯಾಯಾಲಯ ನೋಟಿಸ್ ವೊಂದನ್ನು ಜಾರಿ ಮಾಡಿತ್ತು. ಪೊಲೀಸರ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪವಲ್ಲದೆಯೇ, ಶಶಿಧರ್ ಅವರನ್ನು ಬಂಧಿಸಲು ಇದೂ ಕೂಡ ಕಾರಣವಾಗಿತ್ತು ಎಂದು ಹೇಳಲಾಗುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ