ಬೆಂಗಳೂರು: 8ನೇ ಮಹಡಿಯಿಂದ ಬಿದ್ದು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಹೆಚ್ಎಸ್ಆರ್ ಲೇಔಟ್ ನ ಬೆಳ್ಳಂದೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗುಲ್ಶನ್ ಚೋಪ್ರಾ (38) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಮೂಲತಃ ಪಂಜಾಬ್ ನ ಜಲಂದರ್ ನವನಾಗಿದ್ದು, ನಗದಲ್ಲಿರುವ ಜೆನ್'ಪ್ಯಾಕ್ಟ್ ಎಂಬ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಎಂದಿನಂತೆ ಚೋಪ್ರಾ ನಿನ್ನೆ ಕೆಲಸಕ್ಕೆ ಹಾಜರಾಗಿದ್ದಾನೆ. ಸಾಫ್ಟ್ ವೇರ್ ಕಂಪನಿಯು 12 ಮಹಡಿಗಳನ್ನು ಹೊಂದಿದ್ದು, ಚೋಪ್ರಾ 8 ಮಹಡಿಯಲ್ಲಿದ್ದ. ಕಳೆದ ರಾತ್ರಿ 11.45ರ ಸುಮಾರಿಗೆ ಆಫೀಸಿನ ಕಿಟಕಿಯನ್ನು ತೆಗೆದಿದ್ದಾನೆ.
ಆದಾವ ಕಾರಣಕ್ಕೋ ಏನೋ ಇದ್ದಕ್ಕಿದ್ದಂತೆ ಕಿಟಕಿಯಿಂದ ಕೆಳಗೆ ಜಿಗಿದಿದ್ದಾನೆ. ನಂತರ ಪಾರ್ಕಿಂಗ್ ಪ್ರದೇಶದಲ್ಲಿ ಚೋಪ್ರಾ ಕೆಳಗ್ಗೆ ಬಿದ್ದಿದ್ದಾನೆ. ಶಬ್ಧ ಕೇಳುತ್ತಿದ್ದಂತೆ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದಾಗ ರಕ್ತದ ಮಡುವಿನಲ್ಲಿ ಚೋಪ್ರಾ ಬಿದ್ದಿರುವುದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಆತ್ಮಹತ್ಯೆಗೂ ಮುನ್ನ ಚೋಪ್ರಾ ಯಾವುದೇ ಡೆತ್ ನೋಟ್ ನ್ನು ಬರೆದಿಲ್ಲ. ಪ್ರಸ್ತುತ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾರದ ಹಿಂದಷ್ಟೇ ಮನೆಗೆ ಬಂದಿದ್ದ, ಸೋಮವಾರವಷ್ಟೇ ಕೆಲಸಕ್ಕೆ ಹಾಜರಾಗಿದ್ದ. ಮನೆಗೆ ಬಂದಾಗ ಯಾವುದೇ ವಿಚಾರದ ಬಗ್ಗೆಯೂ ನಾವು ಚರ್ಚೆ ನಡೆಸಿರಲಿಲ್ಲ. ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಆತ ಯಾವ ಕಾರಣಕ್ಕೆ ಕೈ ಹಾಕಿದ ಎಂಬುದು ನಮಗೆ ತಿಳಿಯುತ್ತಿಲ್ಲ. ನನ್ನ ಮಗ ತುಂಬಾ ಸೂಕ್ಷ್ಮ ಸ್ವಭಾವದವನಾಗಿದ್ದ. ಆತನಿಗೆ ಯಾವುದೇ ರೀತಿಯ ವೈಯಕ್ತಿಕ ಸಮಸ್ಯೆಗಳಿರಲಿಲ್ಲ. ಈ ಬಗ್ಗೆ ಆತನ ಹಿರಿಯ ಸಹೋದ್ಯೋಗಿಗಳೊಂದಿಗೆ ಮಾತುಕತೆ ನಡೆಸುತ್ತೇನೆಂದು ಗುಲ್ಶನ್ ಚೋಪ್ರಾ ತಂದೆ ಹೇಳಿಕೊಂಡಿದ್ದಾರೆ.
Advertisement