

ಬೆಂಗಳೂರು: ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದ ಸಾಕ್ಷಿಗಳನ್ನು ಹಾಜರುಪಡಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಸಾಕ್ಷಿಗಳನ್ನು ಹಾಜರುಪಡಿಸಲು ಸೂಚನೆ ನೀಡಬೇಕು ಎಂದು ನಿತ್ಯಾನಂದ ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದರು.
ಬಿಡದಿ ಧ್ಯಾನಪೀಠ ಆಶ್ರಮದ ಭಕ್ತೆ ಆರತಿ ರಾವ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ, ನಿತ್ಯಾನಂದ ಸ್ವಾಮೀಜಿ ಮತ್ತು ಸಂತ್ರಸ್ತೆಯ ವೈದ್ಯಕೀಯ ದಾಖಲೆಗಳನ್ನು ತನಿಖಾಧಿಕಾರಿಯಿಂದ ಪಡೆದು ಸುರಕ್ಷಿತವಾಗಿಡುವಂತೆ ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ನಟಿ ರಂಜಿತಾ ಪ್ರಕರಣ ಸಂಬಂಧ ದಾಖಲಿಸಿರುವ 33 ಸಾಕ್ಷಿಗಳ ಹೇಳಿಕೆ, ನಿತ್ಯಾನಂದ ಸ್ವಾಮೀಜಿ ಮತ್ತು ಸಂತ್ರಸ್ತೆ ಆರತಿರಾವ್ ವೈದ್ಯಕೀಯ ದಾಖಲೆ ಮತ್ತು ಆರತಿರಾವ್ ಅವರು ಅಮೆರಿಕದ ತನ್ನ ಸ್ನೇಹಿತ ಭಾರದ್ವಾಜ್ಗೆ ಕಳುಹಿಸಿರುವ ಇ-ಮೇಲ್ ಸಂದೇಶದ ವಿವರ ಸಲ್ಲಿಸುವಂತೆ ತನಿಖಾಧಿಕಾರಿಗೆ ಸಮನ್ಸ್ ಜಾರಿ ಮಾಡಿ ದಾಖಲೆಗಳನ್ನು ಪಡೆದುಕೊಳ್ಳಬೇಕು. ತನಿಖಾಧಿಕಾರಿಗಳು ಸಲ್ಲಿಸುವ ದಾಖಲೆಗಳನ್ನು ಸುರಕ್ಷಿತವಾಗಿಡಬೇಕು ಎಂದು ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣದ ಕುರಿತು ದಾಖಲಾಗಿರುವ ಸಾಕ್ಷಿಗಳ ಹೇಳಿಕೆ ಹಾಗೂ ವೈದ್ಯಕೀಯ ವರದಿ ನೀಡಲು ನಿರಾಕರಿಸಿದ್ದ ತನಿಖಾಧಿಕಾರಿ ಮತ್ತು ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬಿಡದಿ ಆಶ್ರಮ ಅನುಯಾಯಿ ನಿತ್ಯಾಭಕ್ತಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಆರತಿರಾವ್ ಮೇಲಿನ ನಿತ್ಯಾನಂದ ಸ್ವಾಮೀಜಿ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ 48 ಸಾಕ್ಷಿಗಳನ್ನು ಗುರುತಿಸಿ, 33 ಮಂದಿಯಿಂದ ಪಡೆದ ಹೇಳಿಕೆ, ಬೌರಿಂಗ್ ಆಸ್ಪತ್ರೆಯಲ್ಲಿ ನಿತ್ಯಾನಂದ ಸ್ವಾಮೀಜಿಗೆ ನಡೆಸಿದ ವೈದ್ಯಕೀಯ ಪರೀಕ್ಷೆಯ ದಾಖಲೆಗಳನ್ನು ಸಿಐಡಿ ತನಿಖಾಧಿಕಾರಿಗಳು ಸಂಗ್ರಹಿಸಿದ್ದರು.
Advertisement