ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವನಗರದ ಶಾಸಕ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರು 'ಕಬಾಲಿ' ಚಿತ್ರದ 10 ಲಕ್ಷ ರೂ ಮೌಲ್ಯದ ಟಿಕೆಟ್ಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಜನತೆಗೆ ಫ್ರೀಯಾಗಿ ಹಂಚಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುನಿರತ್ನ ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಇಂದು ಬೆಳಗ್ಗೆ ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿರುವ ನಿರ್ಮಾಪಕರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂನಿರತ್ನ ರಾಜೀನಾಮೆ ನೀಡಬೇಕೆಂದು ನಿರ್ಮಾಪಕರು ಆಗ್ರಹಿಸಿದ್ದಾರೆ.
ಮುನಿರತ್ನ ಅವರು ಕನ್ನಡ ಚಿತ್ರ ನಿರ್ಮಾಪಕರಾಗಿ ಪರಭಾಷಾ ಚಿತ್ರಗಳಿಗೆ ಪ್ರೋತ್ಸಾಹ ನೀಡಿರುವುದನ್ನು ಸಭೆ ಖಂಡಿಸಿದೆ. ಮುನಿರತ್ನ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಆದಷ್ಟು ಬೇಗ ನಿರ್ಮಾಪಕರ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
Advertisement