ಬೆಂಗಳೂರು: ತ್ರಿಕೋನ ಪ್ರೇಮಕ್ಕೆ ಯುವಕ ಬಲಿ, ಓರ್ವನ ಬಂಧನ
ಬೆಂಗಳೂರು: ಪ್ರೇಮ ಪ್ರಕರಣ ಸಂಬಂಧ 26 ವರ್ಷದ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಜಯನಗರದಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕು ಕೋಲೂರು ಗ್ರಾಮದ ಯೋಗೇಶ್ ಕೊಲೆಯಾದ ಯುವಕ. ಕೊಲೆ ಸಂಬಂಧ ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವಕುಮಾರ್ ಪುತ್ರ ಪ್ರತಾಪ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತ ಪ್ರತಾಪ್ ಮಾಗಡಿಯ ಅತ್ತಿನಗೆರೆ ಗ್ರಾಮದವನು. ಮೃತ ಯೋಗೇಶ್ ಜಯನಗರದ ತನ್ನ ಹಿರಿಯ ಅಕ್ಕನ ಮನೆಯಲ್ಲಿ ವಾಸವಾಗಿದ್ದನು.
ಜುಲೈ 19 ರಂದು ಕೆಲಸಕ್ಕೆ ತೆರಳಿದ ಯೋಗೇಶ್ ವಾಪಸ್ ಮನೆಗೆ ಬಂದಿರಲಿಲ್ಲ. ಎರಡು ದಿನದ ನಂತರ ಯೋಗೇಶ್ ಸಹೋದರಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರ ಯೋಗೇಶ್ ಗೆ ಮೈಸೂರಿನ ಯುವತಿಯೋರ್ವಳ ಜೊತೆ ಪ್ರೇಮ ಸಂಬಂಧವಿದ್ದುದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆ ಯುವತಿಯನ್ನು ವಿಚಾರಣೆ ನಡೆಸಿದಾಗ ಪ್ರತಾಪ್ ನ ಬಗ್ಗೆ ಆಕೆ ಮಾಹಿತಿ ಬಹಿರಂಗ ಪಡಿಸಿದ್ದಾಳೆ.
ಪ್ರತಾಪ್ ಮೈಸೂರಿನ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯಿಂದ ದೂರ ಉಳಿಯುವಂತೆ ಯೋಗೇಶ್ ಗೆ ಎಚ್ಚರಿಕೆ ನೀಡಿದ್ದ. ಜುಲೈ 10 ರಂದು ಯೋಗೇಶ್ ಕಚೇರಿಗೆ ತೆರಳುತ್ತಿದ್ದ ವೇಳೆ ಆತನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ