ಹುಬ್ಬಳ್ಳಿ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲವು ಭಾಗದಲ್ಲಿ ನೋಡುವುದಾದರೆ ಕಾಂಗ್ರೆಸ್ ಕೂಡ ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಕುದುರೆ ವ್ಯಾಪಾರ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ಅವರ ದಬ್ಬಾಳಿಕೆ ಆಡಳಿತವನ್ನು ನಿಂದಿಸಬೇಕಾಗಿದೆ. ಪ್ರಸ್ತುತ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರ ಮಧ್ಯೆ ಕೋಲ್ಡ್ ವಾರ್ ನಡೆಯುತ್ತಿದ್ದು, ಇವರಿಬ್ಬ ಒಳಜಗಳ ಪೊಲೀಸ್ ವ್ಯವಸ್ಥೆ ಮೇಲೆ ಬಿದ್ದಿದೆ. ಮಾಧ್ಯಮಗಳಲ್ಲಿ ಇಬ್ಬರು ನಾಯಕರು ಹೇಳಿಕೆ ನೀಡುವುದನ್ನು ಇದಕ್ಕೆ ಸಾಕ್ಷಿಯಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಯೂರಿಯಾ ಕೊರತೆಯಿಲ್ಲ
ಯೂರಿಯಾ ಸಂಗ್ರಹ ಕುರಿತಂತೆ ಮಾತನಾಡಿರುವ ಅವರು, ಮುಂದಿನ 18 ತಿಂಗಳ ಕಾಲದವರೆಗೂ ಯೂರಿಯಾ ಕೊರತೆಯಿಲ್ಲ .ದೇಶದಲ್ಲಿ ಇಂದು 32 ಲಕ್ಷ ಮೆಟ್ರಿಕ್ ಟನ್ ನಷ್ಟು ಯೂರಿಯಾ ಮತ್ತು ಕರ್ನಾಟಕದಲ್ಲಿ 1 ಲಕ್ಷ ಟನ್ ಯೂರಿಯಾ ಇದೆ, ಯೂರಿಯಾ ಬಗ್ಗೆ ಯಾವುದೇ ರಾಜ್ಯಗಳು ದೂರು ಹೇಳುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.
ಯೂರಿಯಾ ಬಗ್ಗೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯೂರಿಯಾ ಸೋರಿಕೆಯಾಗುವ ರಂಧ್ರಗಳ ಸ್ಥಳಗಳಲ್ಲಿ ಬೇವಿನ ಮೂಲಕ ಲೇಪನ ಮಾಡಲಾಗುತ್ತಿದೆ. ಇನ್ನು ಯೂರಿಯಾ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ, ರಾಜ್ಯ ಸರ್ಕಾರವೇ ಈ ಬಗ್ಗೆ ಸರಿಯಾಗಿ ಆಸಕ್ತಿಯನ್ನು ತೋರುತ್ತಿಲ್ಲ. ರೈತರ ಅಗತ್ಯತೆಗಾಗಿ ಎಲ್ಲಿ ಬೇಕಾದರೂ ಘಟಕ ಸ್ಥಾಪನೆ ಮಾಡಲು ಕೇಂದ್ರ ಸಿದ್ಧವಿದೆ. ಆದರೆ, ಮುಖ್ಯಮಂತ್ರಿಗಳು ಗಮನ ಹರಿಸುತ್ತಿಲ್ಲ ಎಂದಿದ್ದಾರೆ.
Advertisement