ಮಂಗಳೂರು: ಕೆಂಪೇಗೌಡ ಅಂತರಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಜೆಟ್ ಏರ್ವೇಸ್ನ ‘9W 2839’ ವಿಮಾನ ಬುಧವಾರ ಬೆಳಿಗ್ಗೆ 10.05ಕ್ಕೆ ಕೆಐಎಎಲ್ ನಿಲ್ದಾಣದಿಂದ ಮಂಗಳೂರಿನ ಕಡೆಗೆ ಹಾರಿದ ಐದಾರು ನಿಮಿಷದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನದ ಒಳಗೆಲ್ಲ ದಟ್ಟ ಹೊಗೆ ತುಂಬಿಕೊಂಡಿತು. ಕೂಡಲೇ ಪೈಲಟ್, ವಿಮಾನವನ್ನು ವಾಪಸ್ ಕೆಐಎಎಲ್ಗೆ ತಂದಿಳಿಸಿದರು. ನಂತರ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಬೇರೆ ವಿಮಾನದಲ್ಲಿ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ ರಾಧಾಕೃಷ್ಣ ತಿಳಿಸಿದ್ದಾರೆ.
ವಿಮಾನದಲ್ಲಿ 65 ಪ್ರಯಾಣಿಕರು ಹಾಗೂ ಏರ್ವೇಸ್ನ ಐವರು ಸಿಬ್ಬಂದಿ ಇದ್ದರು. ಅದೃಷ್ಟವಷಾತ್ ಯಾವುದೇ ದುರಂತ ಸಂಭವಿಸಿಲ್ಲ. ವಿಮಾನದಿಂದ ಹೊರಗೆ ಓಡುವಾಗ ಉಂಟಾದ ತಳ್ಳಾಟದಲ್ಲಿ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ ಎಂದು
ನಾನು ವಿಮಾನ ಹತ್ತಿದ ಐದು ನಿಮಿಷಗಳಲ್ಲೇ ಹೊಗೆ ಕಾಣಿಸಿಕೊಂಡಿತು. ಅದನ್ನು ನೋಡುತ್ತಿದ್ದ ಹಾಗೆ ಹೊಗೆ ಇಡೀ ವಿಮಾನವನ್ನೇ ಆವರಿಸಿತು. ಇದನ್ನು ಎಲ್ಲಾ ಪ್ರಯಾಣಿಕರು ನೋಡಿದರು, ಕೂಡಲೇ ಗಗನಸಖಿಯರಿಗೆ ತಿಳಿಸಿದೆವು, ನಿಜಕ್ಕೂ ಇದೊಂದು ಕಹಿ ಅನುಭವ ಎಂದು ಅಮೆರಿಕಾದಲ್ಲಿ ಸಾಪ್ಟ್ ವೇರ್ ಎಂಜಿನೀಯರ್ ಆಗಿರುವ ಸತ್ಯ ಮಲ್ಯ ತಮ್ಮ ಅನುಭವ ತಿಳಿಸಿದ್ದಾರೆ.
ನಂತರ ಸಿಬ್ಬಂದಿಯು ಕರವಸ್ತ್ರಗಳನ್ನು ಕೊಟ್ಟು ಮುಖ ಮುಚ್ಚಿಕೊಳ್ಳುವಂತೆ ಹೇಳಿದರು. ಇತರೆ ಪ್ರಯಾಣಿಕರು ನೆರವಿಗಾಗಿ ಕೂಗಿಕೊಳ್ಳುತ್ತಿದ್ದರು. ಏಳೆಂಟು ನಿಮಿಷಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ಸುರಕ್ಷಿತವಾಗಿ ಕೆಐಎಎಲ್ಗೆ ಬಂದಿಳಿದೆವು ಎಂದರು.
ಕೆಐಎಎಲ್ ಬರುತ್ತಿದ್ದಂತೆಯೇ ವಿಮಾನದಿಂದ ಇಳಿದು, ಓಡಿದೆವು. ಈ ವೇಳೆಗಾಗಲೇ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಯು ಎಂಜಿನ್ ಮೇಲೆ ನೀರು ಹಾಯಿಸಿ ಹೊಗೆ ನಿಯಂತ್ರಣಕ್ಕೆ ತಂದರು ಎಂದು ಅವರು ಹೇಳಿದರು.
Advertisement