ಬೆಂಗಳೂರು: ರಾಜ್ಯದಲ್ಲೆಡೆ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ಹಲವು ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ನೀಡಿರುವ ಮಾಹಿತಿ ನೀಡಿರುವ ಪ್ರಕಾರ, 20 ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 200 ಮಿಮೀ ನಷ್ಟು ಮಳೆಯಾಗಿರುವುದಾಗಿ ತಿಳಿಸಿದೆ.
ಭಾರಿ ಮಳೆಯ ಪರಿಣಾಮ ಲಿಂಗನಮಕ್ಕಿ ಜಲಾಶಯ ಹಾಗೂ ಕಬಿನಿ ಜಲಾಶಯಗಳು ಬಹುತೇಕ ಭರ್ತಿಯಾಗುವ ಹಂತದಲ್ಲಿದ್ದು, ಮಳೆಯ ಅಬ್ಬರಕ್ಕೆ ಕೊಡಗು ಜಿಲ್ಲೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಿರು ಬೇಸಿಗೆಯಿಂದ ಬೇಸತ್ತಿದ್ದ ಉತ್ತರ ಕರ್ನಾಟಕ ಜನತೆ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 24,711 ಕ್ಯೂಸೆಕ್ಸ್ ಗೂ ಹೆಚ್ಚು ಒಳಹರಿವು, ಕಬಿನಿಯಲ್ಲಿ 15,097 ಕ್ಯೂಸೆಕ್ಸ್ ದಾಖಲಾಗಿದೆ. ಇದರಂತೆ ಕೊಡಗು, ಕೃಷ್ಣರಾಜಸಾಗರ್, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಆರೋಗ್ಯಕರ ಬೆಳವಣಿಗೆಗಳು ಕಂಡುಬಂದಿದೆ.
ಮತ್ತಷ್ಟು ಮಳೆಯಾಗುವ ಸಾಧ್ಯತೆ
ಪ್ರಸ್ತುತ ವಾತಾವರಣವನ್ನು ಗಮನಿಸಿದರೆ ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 28 ರಿಂದ 29ರವರೆಗಿನ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೊಡಕನಿಯಲ್ಲಿ 327 ಮಿಮೀ ನಷ್ಟು ಮಳೆಯಾಗಿದೆ. ಕೊಡಗಿನ ಭಾಗಮಂಡಲದಲ್ಲಿ 270 ಮಿಮೀ ಮತ್ತು ಶಿವಮೊಗ್ಗದ ಸುಲಗೋಡು 246.6 ಮಿಮೀ ನಷ್ಟು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ಮಾಹಿತಿ ನೀಡಿದೆ.
ಶಿವಮೊಗ್ಗದಲ್ಲಿ ಭಾರಿ ಮಳೆ ಸಾಧ್ಯತೆ
ಸಾಗರ, ತೀರ್ಥಹಳ್ಳಿ, ಹೊಸನಗರ ಮತ್ತು ಆಗುಂಬೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರಿಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಘಟಕ ಮಾಹಿತಿ ನೀಡಿದೆ. ಭಾರಿ ಮಳೆಯಿಂದಾಗಿ ತುಂಗ, ಭದ್ರಾ, ಶರಾವತಿ ಮತ್ತು ಕುಮುದಾವತಿ ನದಿಗಳು ಭರ್ತಿಯಾಗುವ ಸಾಧ್ಯತೆಗಳಿವೆ.
Advertisement