ಬೆಳಗಾವಿ; ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಸತ್ತಳೆಂದು ತಿಳಿದು ಕಾಡಿನಲ್ಲೇ ಬಿಟ್ಟು ಬಂದ ಘಟನೆ ಬೆಳಗಾವಿಯ ಖಾನಾಪುರದಲ್ಲಿ ನಡೆದಿದೆ. ಪತಿಯಿಂದ ಹಲ್ಲೆಗೊಳಗಾದ ಮಹಿಳೆ ಸುಮಾರು ಒಂದೂವರೆ ಕಿ.ಮೀ ದೂರ ಕಾಡಿನಲ್ಲಿ ತೆವಳಿಕೊಂಡು ಬಂದು ಆಸ್ಪತ್ರೆಗೆ ಸೇರಿದ್ದಾಳೆ.
ಬೆಳಗಾವಿಯ ರಾಮದುರ್ಗ ತಾಲೂಕಿನ ತಿಮ್ಮಾಪುರ ಗ್ರಾಮದ ಶಾಮನಗೌಡ ಶೇಖರಗೌಡ ಪಾಟೀಲ್ ಆತನ ಪತ್ನಿ, ಪದ್ಮಾವತಿಯನ್ನು ಜೂನ್ 23 ರಂದು ಕಾಡಿನ ತುತ್ತತುದಿಗೆ ಕರೆದೊಯ್ದಿದ್ದಾನೆ. ನಂತರ ಅಲ್ಲಿ ಕುಡುಗೋಲಿನಿಂದ ಆಕೆಯ ಕತ್ತು ಸೀಳಿದ್ದಾನೆ, ಈ ವೇಳೆ ರಕ್ಷಿಸಿಕೊಳ್ಳಲು ಯತ್ನಿಸಿದ ಪದ್ಮಾವತಿಯ ನಾಲ್ಕು ಕೈ ಬೆರಳುಗಳು ಮತ್ತು ಬಲ ಗೈ ಕತ್ತರಿಸಿದೆ.
ಹಲ್ಲೆಗೊಳಗಾದ ಪದ್ಮಾವತಿ ಪ್ರಜ್ಞೆ ತಪ್ಪಿ ಬಿದ್ದಾಗ ದೊಡ್ಡ ಮರದ ತುಂಡಿನಿಂದ ಹೊಡೆದು ಆಕೆಯ ಬೆನ್ನು ಮೂಳೆ ಮುರಿದಿದ್ದಾನೆ. ನಂತರ ಆಕೆ ಸತ್ತಳೆಂದು ಬಾವಿಸಿದ ಸೋಮನಗೌಡ ಅಲ್ಲಿಂದ ಹೊರಟಿದ್ದಾನೆ.
ಘಟನೆ ನಡೆದ ಎಷ್ಟೋ ಹೊತ್ತಿನ ನಂತರ ಪದ್ಮಾವತಿಗೆ ಪ್ರಜ್ಞೆ ಬಂದಿದ್ದು ಅಲ್ಲಿಂದ ತೆವಳಿಕೊಂಡು ಬೆಳಗಾವಿ-ಚೋರ್ಲಾ- ಗೋವಾ ಹೆದ್ದಾರಿ ತಲುಪಿದ್ದಾಳೆ. ಈ ವೇಳೆ ಕೂಗಿಕೊಂಡರು ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಅಂತಿಮವಾಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಆಕೆಗೆ ಸಹಾಯ ಮಾಡಿದ್ದಾರೆ.
ಬಸ್ ನೊಳಗೆ ಆಕೆಯನ್ನು ಕರೆತಂದ ಚಾಲಕ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ. ನಂತರ ಪೊಲೀಸರು ಆಕೆಯನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪದ್ಮಾವತಿ ತಂದೆ ಬಸವರಾಜ ಮಲ್ಲಪ್ಪ ಕುಷ್ಟಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಶಾಮನಗೌಡ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎರಡು ವರ್ಷದ ಹಿಂದೆ ಮದುವೆ ಆಗಿದ್ದು, ಅಂದಿನಿಂದ ಪ್ರತಿದಿನ ಪಾಟೀಲ್ ಮತ್ತು ಆತನ ತಾಯಿ ತನ್ನ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿದ್ದಾರೆ.
Advertisement