ಬೆಂಗಳೂರು: ಇಲ್ಲಿನ ಹಲಸೂರು ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದ್ದು, ಸೋಮವಾರ ವಾಯುವಿಹಾರಕ್ಕೆ ಹೋಗುತ್ತಿದ್ದವರು ಇದನ್ನು ಗಮನಕ್ಕೆ ತಂದಿದ್ದಾರೆ.
ಸಾವಿರಾರು ಮೀನುಗಳು ಸತ್ತು ದಡ ಸೇರಿದ್ದು, ಜಲ ಮಾಲಿನ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಕೆರೆಯನ್ನು ಸ್ವಚ್ಛಗೊಳಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು.
ಆದಾಗ್ಯೂ, ಪ್ರತೀ ವರ್ಷ ಮಾರ್ಚ್ ತಿಂಗಳಲ್ಲಿ ಇಲ್ಲಿ ಮೀನುಗಳು ಸತ್ತು ಹೋಗುತ್ತವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ವಾಮನ ಆಚಾರ್ಯ ಹೇಳಿರುವುದಾಗಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ನೀರಿನಲ್ಲಿ ಅಡಕವಾಗಿರುವ ಆಕ್ಸಿಜನ್ನ ಪ್ರಮಾಣ ಕಡಿಮೆಯಾಗುವ ಕಾರಣ ಇಲ್ಲಿ ಮೀನುಗಳು ಸಾಯುತ್ತವೆ ಎಂದು ಆಚಾರ್ಯ ಹೇಳಿದ್ದಾರೆ.