ಬೆಂಗಳೂರು: ಬುದ್ಧಿಮಾಂದ್ಯ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಿನ್ನೆ ನಡೆದಿದೆ.
47 ವರ್ಷದ ಕಮಲಮ್ಮ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ 13 ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು, ಪತಿ ನಾರಾಣಪ್ಪ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದರು.
ಕಳೆದ ಎರಡು ತಿಂಗಳ ಹಿಂದೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆ ತರಲಾಗಿತ್ತು. ಬುಧವಾರ ಬೆಳಗ್ಗೆ 6.39ರ ಸುಮಾರಿಗೆ ಮನೆಯವರೆಲ್ಲ ಮಲಗಿದ್ದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೊದಲ ಮಗಳಿಗೆ ಮದುವೆ ಮಾಡಿದ್ದ ನಾರಾಣಪ್ಪ, ಕಿರಿಯ ಪುತ್ರಿ ಮತ್ತು ಪತ್ನಿ ಕಮಲಮ್ಮಳೊಂದಿಗೆ ವಾಸವಾಗಿದ್ದರು. ಈ ಹಿಂದೆ ಕಮಲಮ್ಮ ಮನೆಯಿಂದ ಎರಡು ಬಾರಿ ಓಡಿ ಹೋಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.