ಮಂಗಳೂರು: ಪಶ್ಚಿಮ ಘಟ್ಟಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾರಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ನಡೆದ ಬೃಹತ್ ಪ್ರತಿಭಟನಾ ಜಾಥಾದಲ್ಲಿ ವಿವಿಧ ಧರ್ಮಗುರುಗಳು ಹಾಗೂ ಮುಖಂಡರು ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.
ವಿವಿಧ ಧರ್ಮಗಳ ಧರ್ಮಗುರುಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ನೇತ್ರಾವತಿ ನದಿ ಉಳಿಸುವ ತನಕ ಹೋರಾಟ ಮುಂದುವರಿಯಲಿದ್ದು, ಯಾವುದೇ ತ್ಯಾಗಕ್ಕೂ ಬದ್ಧರಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಎತ್ತಿನಹೊಳೆ ಯೋಜನೆಯು ತುಳುನಾಡನ್ನು ನಾಶ ಮಾಡುವ ಷಡ್ಯಂತ್ರವಾಗಿದೆ. ಎತ್ತಿನಹೊಳೆ ಯೋಜನೆ ನಿಲ್ಲಿಸಲು ಸಾಕಷ್ಟು ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಮಾತನಾಡಿ ಸರ್ಕಾರ ಈ ಯೋಜನೆಯನ್ನು ನಿಲ್ಲಿಸದಿದ್ದರೆ ನಾವೆಲ್ಲರೂ ಸೇರಿ ನಿಲ್ಲಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ಮನವಿಯನ್ನು ಜಿಲ್ಲಾಧಿಕಾರಿ ಇಬ್ರಾಹಿಂ ಸ್ಥಳಕ್ಕೆ ಭೇಟಿ ನೀಡಿ ಪಡೆಯಬೇಕೆಂದು ಒತ್ತಾಯಿಸಿದರೂ ಡಿಸಿ ಆಗಮಿಸದ ಹಿನ್ನೆಲೆಯಲ್ಲಿ ಘೋಷಣೆಗಳು ತೀವ್ರಗೊಂಡು ಸ್ವಲ್ಪ ಸಮಯ ಬಿಗು ವಾತಾವರಣ ನಿರ್ಮಾಣವಾಯಿತು. ಮಂಗಳೂರು ವ್ಯಾಪ್ತಿಯ ಪೊಲೀಸ್ ಠಾಣೆಗಳ ನಿರೀಕ್ಷಕರು, ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿಗಳ ಕಚೇರಿಯ ದ್ವಾರದ ಬಾಗಿಲು ಹಾಕಿ ಬ್ಯಾರಿಕೇಡ್ಗಳನ್ನು ಅಡ್ಡವಿಟ್ಟಿದ್ದರು.
10 ನಿಮಿಷಗಳ ಸಮಯ ನೀಡಿದರೂ, ಪುನಃ ಡಿಸಿ ಸ್ಥಳಕ್ಕೆ ಬರಬೇಕೆಂದು ಹೆಚ್ಚಿನ 5 ನಿಮಿಷ ಕಾಯುವ ನಿರ್ಧರಿಸಿ, ಬರದಿದ್ದಲ್ಲಿ ಗೇಟಿನ ಒಳಪ್ರವೇಶಿಸುವುದಾಗಿ ನಿರ್ಣಯಿಸಲಾಗಿತ್ತು. ಆದರೆ, ಆಗ ಭೇಟಿ ನೀಡಿದ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.
ಶಾಸಕ ಲೋಬೋ, ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಸಂಚಾಲಕ ಸತ್ಯಜಿತ್ ಸುರತ್ಕಲ್, ಹನೀಫ್ ಖಾನ್ ಕೊಡಾಜೆ ವಿಜಯಕುಮಾರ್ ಶೆಟ್ಟಿ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.
Advertisement