ಕೊಪ್ಪಳ: ಸ್ವಂತ ಗಂಡನೇ ತನ್ನ ಪತ್ನಿಯನ್ನು ಸ್ನೇಹಿತನೊಂದಿಗೆ ಸಹಕರಿಸು ಎಂದು ಒತ್ತಾಯಿಸಿದ ವಿಲಕ್ಷಣ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಗಂಡನ ಒತ್ತಾಯದಿಂದ ತೀವ್ರ ನೊಂದ ಪತ್ನಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ಹೆಂಡತಿಗೆ ಒತ್ತಾಯಿಸುತ್ತಿದ್ದ ವಿಜಯಮಹಾಂತೇಶ ಮೇಟಿ ಎಂಬಾತನ ವಿರುದ್ಧ ಆತನ ಹೆಂಡತಿ ಪೊಲೀಸರಲ್ಲಿ ದೂರು ನೀಡಿದ್ದಾಳೆ. ತನ್ನ ವಿರುದ್ಧ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆಯೇ ಪತಿ ವಿಜಯಮಹಾಂತೇಶ ಮೇಟಿ ಪರಾರಿಯಾಗಿದ್ದು, ಪತ್ನಿ ದೂರಿನ ಮೇರೆಗೆ ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
2014ರ ಜೂನ್ 15ರಂದು ವಿಜಯ ಮಹಾಂತೇಶ ವಿಜಯಪುರದ ಯುವತಿಯೊಂದಿಗೆ ವಿವಾಹವಾಗಿದ್ದ. ವಿವಾಹವಾದ ಒಂದೆರಡು ವರ್ಷ ಪತ್ನಿಯೊಂದಿಗೆ ಅನ್ಯೋನ್ಯವಾಗಿದ್ದ ವಿಜಯಮಹಾಂತೇಶ ಬಳಿಕ ದುಷ್ಟರ ಸಹವಾಸ ಮಾಡಿ ಕುಡಿತ ಮತ್ತು ಜೂಜಿಗೆ ದಾಸನಾಗಿದ್ದ. ಪೊಲೀಸ್ ಮೂಲಗಳು ತಿಳಿಸಿರುವಂತೆ ಯಲಬುರ್ಗಾ ತಾಲೂಕಿನ ತಳಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ವಿಜಯಮಹಾಂತೇಶ ಸ್ನೇಹಿತರ ಜತೆ ಸೇರಿ ಮದ್ಯಸೇವನೆ ಶುರು ಮಾಡಿದ. ಕೆಲ ದಿನಗಳ ಬಳಿಕ ಸ್ನೇಹಿತರೊಂದಿಗೆ ಮನೆಯಲ್ಲೇ ಮದ್ಯ ಸೇವನೆ ಶುರುವಿಟ್ಟುಕೊಂಡು, ಪತ್ನಿಗೆ ದೈಹಿಕ-ಮಾನಸಿಕ ಹಿಂಸೆ ನೀಡತೊಡಗಿದ.
ನಂತರ ಕುಡಿದ ಅಮಲಿನಲ್ಲಿ ಸ್ನೇಹಿತನೊಂದಿಗೆ ಸಹಕರಿಸುವಂತೆ ಕೈಹಿಡಿದ ಪತ್ನಿಯನ್ನು ಆಗ್ರಹಿಸಿದ. ಇದಕ್ಕೆ ಪತ್ನಿ ಒಪ್ಪದಿದ್ದಾಗ ಆಕೆ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ಇದರಿಂದ ಮನನೊಂದ ಗೃಹಿಣಿ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Advertisement