ಮೈಸೂರು: ಮೂರು ದಿನಗಳ ಕಾಲ ಮೈಸೂರಿನಲ್ಲಿ ನಿಯೋಜಿಸಲಾಗಿದ್ದ ಮಾವು ಮತ್ತು ಹಲಸು ಮೇಳ ಇದೀಗ ರೈತರ ಪಾಲಿಗೆ ಹುಳಿಯಾಗಿ ಪರಿಣಮಿಸಿದೆ.
ಮೈಸೂರಿನ ಹಾಪ್ ಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾವಿನ ಹಣ್ಣಿಗೆ ನಿಗದಿಪಡಿಸಿದ ಬೆಲೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ತುಮಕೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ರಾಮನಗರ ಮತ್ತು ಇನ್ನಿತರೆ ಜಿಲ್ಲೆಯ ರೈತರು ವಿರೋಧ ವ್ಯಕ್ತಪಡಿಸಿದ್ದು, ಹಣ್ಣಿಗೆ ಅತ್ಯಂತ ಕಡಿಮೆ ದರವನ್ನು ನಿಗದಿಪಡಿಸಲಾಗಿದೆ ಎಂದು ಹೇಳುತ್ತಿದ್ದಾರೆ.
ಕೊನೆಯ ಸಮಯದಲ್ಲಿ ಮಾವಿನ ಹಣ್ಣಿಗೆ ನಿಗದಿ ಪಡಿಸಿದ ಬೆಲೆ ನಮಗೆ ಸಾಕಷ್ಟು ಆಘಾತವನ್ನುಂಟು ಮಾಡಿತ್ತು. ಇದೊಂದು ಕಹಿ ಅನುಭವವಾಗಿದೆ. ಕಳೆದ ವರ್ಷ 1 ಕೆ.ಜಿ ಮಾವಿನ ಹಣ್ಣಿನ್ನು ರು.80ಕ್ಕೆ ಮಾರಾಟ ಮಾಡಲಾಗಿತ್ತು ಎಂದು ರೈತರೊಬ್ಬರು ಹೇಳಿದ್ದಾರೆ.
ಮಧ್ಯವರ್ತಿಗಳನ್ನು ನಿಯಂತ್ರಿಸುವ ಸಲುವಾಗಿ ಮೇಳಗಳನ್ನು ಆಯೋಜಿಸಲಾಗಿತ್ತು. ಆದರೆ, ಇದೀಗ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಆಧಿಕಾರಿಗಳೇ ಏಜೆಂಟ್ ಗಳ ಹಾಗೆ ವರ್ತಿಸುತ್ತಿದ್ದಾರೆ ಎಂದು ಮತ್ತೆ ಕೆಲವು ರೈತರು ಹೇಳಿದ್ದಾರೆ.
ಇನ್ನು ರೈತರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು ಇದೀಗ ಮಾವು ರೈತರೊಂದಿಗೆ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರೈತರೊಂದಿಗೆ ಮಾತುಕತೆ ನಂತರ ಬೆಲೆ ನಿಗದಿ ಪಡಿಸುವಂತೆ ತಿಳಿಸಿದ್ದಾರೆ.
Advertisement