ಬೆಂಗಳೂರು: ವೈದ್ಯರ ನಿವೃತ್ತಿ ಅವಧಿಯನ್ನು 65ಕ್ಕೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ವೈದ್ಯರ ನಿವೃತ್ತಿ ಅವಧಿ ಏರಿಕೆ ಮಾಡುವ ಬದಲು ಮೊದಲು ಗ್ರಾಮೀಣ ಭಾಗಕ್ಕೆ ಅಗತ್ಯವಿರುವ ವೈದ್ಯಕೀಯ ಸೇವೆಗಳ ಕುರಿತು ಗಮನಹರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಸರ್ಕಾರಿ ವೈದ್ಯರ ನಿವೃತ್ಥಿ ವಯಸ್ಸನ್ನು 65ಕ್ಕೆ ಏರಿಕೆ ಮಾಡಲು ತೀರ್ಮಾನಿಸಿರುವುದಾಗಿ ತಿಳಿಸಿದ್ದರು. ದೇಶದಲ್ಲಿ ಸರ್ಕಾರಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ವೈದ್ಯರ ನಿವೃತ್ತಿ ಅವಧಿಯನ್ನು 65ಕ್ಕೆ ಏರಿಕೆ ಮಾಡಲಾಗಿದ್ದು, ಈ ಬದಲಾವಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಎಲ್ಲಾ ವೈದ್ಯರಿಗೆ ಅನ್ವಯವಾಗಲಿದೆ ಎಂದು ಹೇಳಿತ್ತು.
ಕೇಂದ್ರ ಸರ್ಕಾರ ಈ ತೀರ್ಮಾನದ ಕುರಿತಂತೆ ನಿನ್ನೆ ಪ್ರತಿಕ್ರಿಯೆ ನೀಡಿರುವ ಖಾದರ್ ಅವರು, ಕೇಂದ್ರ ಸರ್ಕಾರ ಸರ್ಕಾರಿ ವೈದ್ಯರ ನಿವೃತ್ತಿ ಅವಧಿಯನ್ನು 65ಕ್ಕೆ ವಿಸ್ತರಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಇಷ್ಟು ಅವಧಿಯಲ್ಲಿ ಯಾರು ಕೆಲಸ ಮಾಡಲು ಇಚ್ಛಿಸುತ್ತಾರೆ. ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಬೇಕಿತ್ತು. ಪ್ರತೀ ರಾಜ್ಯಕ್ಕೂ ಅದರದ್ದೇ ಆದ ಕೆಲವು ಸಾಧಕ-ಬಾಧಕಗಳೆಂಬುದಿರುತ್ತದೆ. ಕರ್ನಾಟಕದಲ್ಲಿ ವೈದ್ಯ ಕೊರತೆಯಿಲ್ಲ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಗಳಿವೆ. ಕೇಂದ್ರ ಸರ್ಕಾರ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಕುರಿತಂತೆ ಗಮನ ಹರಿಸಿದ್ದರೆ ಇದು ಜನರಿಗೆ ಸಹಾಯವಾಗುತ್ತಿತ್ತು. ಆದರೆ, ಕೇಂದ್ರದ ಈ ನಿಲುವು ವೈದ್ಯರು ಆಡಳಿತ ಸ್ಥಾನಕ್ಕೆ ಹಾಗೂ ಹಿರಿಯ ಸ್ಥಾನಕ್ಕೆ ಹೋಗಲಷ್ಟೇ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಖಾದರ್ ಅವರ ಈ ಹೇಳಿಕೆಗೆ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಅಧ್ಯಕ್ಷ ವೀರಭದ್ರಯ್ಯ ಅವರು ಕೂಡ ಸಾಥ್ ನೀಡಿದ್ದು, ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಯುವ ವೈದ್ಯರನ್ನು ನೇಮಕ ಮಾಡಿಕೊಳ್ಳುವುದರ ಕುರಿತಂತೆ ಗಮನಹರಿಸಬೇಕು. ರಾಜ್ಯದಲ್ಲಿನ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯ ಕೊರತೆಯಿದೆ. ಗ್ರಾಮೀಣ ಸೇವೆ ಮುಂಬರುವ ವೈದ್ಯರಿಗೆ ದೇಶ ಯಾವ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಸುತ್ತದೆ ಎಂದಿದ್ದಾರೆ.
ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ವೈದ್ಯರು 70ನೇ ವಯಸ್ಸಿನವರೆಗೂ ಕಾರ್ಯನಿರ್ವಹಿಸುತ್ತಾರೆ. ಆದರೆ, ಅಂತಹ ವೈದ್ಯರಿಗೆ ಸರ್ಕಾರ ಜವಾಬ್ದಾರಿಗಳನ್ನು ಕೊಡುವುದಿಲ್ಲ. ಇಂತಹ ವೈದ್ಯರು ಕಲಿಕೆಯಲ್ಲಿರುವ ವೈದ್ಯರಿಗೆ ತಮ್ಮ ಅನುಭವಗಳನ್ನು ಹೇಳಿಕೊಡುತ್ತಾರೆ. ಇದು ಬೆಳೆಯುವ ವೈದ್ಯರಿಗೆ ಸಹಾಯಕವಾಗಲಿದೆ. ಕೇಂದ್ರ ಸರ್ಕಾರ ಮೊದಲು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸಂಖ್ಯೆಯನ್ನು ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
Advertisement