ಕೊಡಗು: ಕೊಡವರ ಕುಲದೈವ ಕಾವೇರಿ ಸೋಮವಾರ ಬೆಳಗ್ಗೆ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದು, ತೀರ್ಥೋದ್ಭವ ಕಾರ್ಯಕ್ರಮಕ್ಕೆ ಆಗಮಸಿದ್ದ ಲಕ್ಷಾಂತರ ಮಂದಿ ಪವಿತ್ರ ಸ್ನಾನಮಾಡಿದರು.
ಈ ಹಿಂದೆ ನಿಗದಿಯಾಗಿದ್ದ ಮುಹೂರ್ತದಲ್ಲೇ ಅಂದರೆ ಲಲಿತ ಪಂಚಮಿಯ ಶುಭ ಮಿಥುನ ಲಗ್ನದಲ್ಲಿ ಇಂದು ಬೆಳಗ್ಗೆ 6 ಗಂಟೆ 29 ನಿಮಿಷಕ್ಕೆ ಬ್ರಹ್ಮಕುಂಡಿಕೆಯಿಂದ ಕಾವೇರಿ ತೀರ್ಥೋದ್ಭವ ಆಗಿದೆ. ಕಾವೇರಿ ತುಲಾ ಸಂಕ್ರಮಣ ಇನ್ನೂ ಒಂದು ತಿಂಗಳು ನಡೆಯಲಿದ್ದು, ಒಂದು ತಿಂಗಳ ಪೂರ್ತಿ ಭಕ್ತರು ಪವಿತ್ರ ಸ್ನಾನ ಕಾರ್ಯಕ್ರಮದಲ್ಲಿ ತೊಡಗಲಿದ್ದಾರೆ.
ಕಾವೇರಿ ನೀರಿನ ಪವಿತ್ರ ಸ್ನಾನಮಾಡಿ ತೀರ್ಥ ಸ್ವೀಕರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀಥಿ ಇದ್ದು, ಇದೇ ಕಾರಣಕ್ಕೆ ಪ್ರತೀ ವರ್ಷ ನಡೆಯುವ ಈ ಐತಿಹಾಸಿಕ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ ರಾಜ್ಯಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ವಿಶೇಷವೆಂದರೆ ಈ ವರ್ಷದ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಮಂಡ್ಯ ಮಾಜಿ ಸಂಸದೆ ರಮ್ಯಾ ಭಾಗವಹಿಸಿದ್ದರು.
ಇತ್ತೀಚೆಗೆ ಕಾವೇರಿಗಾಗಿ ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಮಂಡ್ಯ ಜನರ ಆಕ್ರೋಶಕ್ಕೆ ತುತ್ತಾಗಿದ್ದ ರಮ್ಯಾ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನಸೆಳೆದರು. ಈ ವೇಳೆ ಕಾವೇರಿ ವಿವಾದವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮಾತುಕತೆ ಮೂಲಕವಷ್ಚೇ ಕಾವೇರಿ ವಿವಾದವನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
Advertisement