ದಾವಣಗೆರೆ: ಹುಬ್ಬಳ್ಳಿ- ಮೈಸೂರು ಇಂಟರ್ ಸಿಟಿ ರೈಲು ಜಪ್ತಿ, ಪ್ರಯಾಣಿಕರ ಪರದಾಟ
ದಾವಣಗೆರೆ: ಸಿಟಿ ಸಿವಿಲ್ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಹರಿಹರದಲ್ಲಿ ಹುಬ್ಬಳ್ಳಿ- ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ ಮಾಡಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿತ್ತು.
ಹುಬ್ಬಳ್ಳಿ- ಮೈಸೂರು ಇಂಟರ್ ಸಿಟಿ ರೈಲನ್ನು ಹರಿಹರದಲ್ಲಿ ಇಂದು ಬೆಳಿಗ್ಗೆ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದು, ಸುಮಾರು 2 ಗಂಟೆ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು.
ಕೊಟ್ಟೂರು ರೈಲ್ವೇ ಮಾರ್ಗ ನಿರ್ಮಾಣಕ್ಕೆ ರೈತರಿಂದ ಭೂಮಿ ಪಡೆಯಲಾಗಿತ್ತು. 15 ವರ್ಷಗಳ ಹಿಂದೆ ಪಡೆದ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮೂವರು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಬಾಕಿ ಇರುವ 37 ಲಕ್ಷ ರೂಪಾಯಿಗಳನ್ನು ರೈಲ್ವೇ ಇಲಾಖೆಯಿಂದ ಕೊಡಿಸಬೇಕೆಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ನ್ಯಾಯಾಲಯ ರೈಲು ಜಪ್ತಿಗೆ ಆದೇಶ ನೀಡಿತ್ತು. ಅದರಂತೆ ಹುಬ್ಬಳ್ಳಿ- ಮೈಸೂರು ಇಂಟರ್ ಸಿಟಿ ರೈಲನ್ನು ಜಪ್ತಿ ಮಾಡಲಾಗಿತ್ತು. ನಂತರ ಸುಮಾರು 2 ಗಂಟೆಯ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು, ಆದರೆ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಕೊಡುವ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಭರವಸೆ ನೀಡಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ