ಬೆಂಗಳೂರು: ಬಸ್ ಪಾಸ್ ವಿಚಾರವಾಗಿ ವಿದ್ಯಾರ್ಥಿ ಹಾಗೂ ಲೇಡಿ ಕಂಡಕ್ಟರ್ ನಡುವೆ ಗಲಾಟೆ ನಡೆದು ನಿರ್ವಾಹಕಿ ವಿದ್ಯಾರ್ಥಿಯ ಕೈ ಕಚ್ಚಿಕುವ ಘಟನೆ ನಗರದ ಗಂಗಮ್ಮನ ಗುಡಿಯ ಕಮ್ಮಗೊಂಡನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಜಾಲಹಳ್ಳಿ, ಕೆ.ಆರ್. ಪುರಂನ ಬಿಎಂಟಿಸಿ ಬಸ್ನಲ್ಲಿ ಈ ಗಲಾಟೆ ನಡೆದಿದ್ದು, ಬಸ್ ಪಾಸ್ ಸಂಬಂಧ ಪ್ರಾರಂಭವಾದ ಈ ಜಗಳ ಬೀದಿ ಜಗಳವಾಗಿ ಮಾರ್ಪಟ್ಟಿತ್ತು. ವಿದ್ಯಾರ್ಥಿಗಳೊಂದಿಗೆ ಕಾಳಗಕ್ಕೆ ಇಳಿದ ಲೇಡಿ ಕಂಡಕ್ಟರ್, ಆವೇಶದಲ್ಲಿ ವಿದ್ಯಾರ್ಥಿಯ ಎಡಗೈ ತೋಳನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ವಿದ್ಯಾರ್ಥಿಯ ಕೈ ಮೇಲೆ ನಿರ್ವಾಹಕಿಯ ಹಲ್ಲಿನ ಗುರುತು ಮೂಡಿದೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ ಬಂದು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಕಂಡಕ್ಟರ್ ವಿದ್ಯಾರ್ಥಿ ಮೇಲೆ ಜಿದ್ದಿಗೆ ಬಿದ್ದವರಂತೆ ಜಗಳಕ್ಕೆ ನಿಂತಿದ್ದರು. ಜನ ಗುಂಪಾಗಿ ಸೇರಿದ್ದನ್ನೂ ಲೆಕ್ಕಿಸದ ಕಂಡಕ್ಟರ್ ತಕ್ಷಣ ವಿದ್ಯಾರ್ಥಿ ಕೈಹಿಡಿದು ಕಚ್ಚಿ, ಇನ್ನೊಬ್ಬನಿಗೂ ಕಚ್ಚಲು ಮುಂದಾಗಿದ್ದಾರೆ. ತಪ್ಪಿಸಿಕೊಳ್ಳುವ ಅವಸರದಲ್ಲಿ ಕಂಡಕ್ಟರ್ ಕೆಳಕ್ಕೆ ಬಿದ್ದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಇಬ್ಬರನ್ನು ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
Advertisement